ಬಿಜೆಪಿಯೇತರ ಪಕ್ಷಗಳ ಏಕತೆ ಸಾಧ್ಯವೇ?
ಕೇಂದ್ರದ ಅಧಿಕಾರ ಸೂತ್ರವನ್ನು ವಹಿಸಿಕೊಂಡಿರುವ ಕೋಮುವಾದಿ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಪ್ರಭುತ್ವದಿಂದ ಅದನ್ನು ದೂರ ಸರಿಸುವುದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸಾಧ್ಯವಾಗುವುದೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರವಾಗಿ ನಡೆದಿದೆ. ಮುಂದಿನ ವರ್ಷ ಅಂದರೆ ಇನ್ನು 10 ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಈ ಬಾರಿ ಅತ್ಯಂತ ನಿರ್ಣಾಯಕವಾಗಿದೆ. ಈಗಿರುವ ವಾತಾವರಣವನ್ನು ಸೂಕ್ಷ್ಮವಾಗಿಅವಲೋಕಿಸಿದರೆ ಬಿಜೆಪಿಯನ್ನು ಪರಾಭವಗೊಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಅಸಾಧ್ಯವೂ ಅಲ್ಲ. ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಮತ್ತು ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳ ಜೊತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜನತೆಗೆ ನೀಡಿದ ಅಶ್ವಾಸನೆಗಳನ್ನು ಈಡೇರಿಸಿಲ್ಲ. ಆದರೂ ಇಂದಿಗೂ ಮೋದಿಯ ಪ್ರಭಾವ ಕಡಿಮೆಯಾದಂತೆ ಕಾಣುತ್ತಿಲ್ಲ.
ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗ ಸ್ವಲ್ಪ ತಡವಾಗಿ ಪ್ರತಿಪಕ್ಷಗಳಲ್ಲಿ ಎಚ್ಚರ ಉಂಟಾಗಿದೆ. ಬಿಜೆಪಿಯೇತರ ಪಕ್ಷಗಳಿಗೆ ತಾವು ಒಂದುಗೂಡದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಮೂಡಿದೆ. ಪ್ರತಿಪಕ್ಷಗಳು ಒಂದುಗೂಡಿದರೆ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದು ಎಂಬುದು ಉತ್ತರ ಪ್ರದೇಶದ ಎರಡು ಲೋಕಸಭಾ ಚುನಾವಣೆಯಿಂದ ಸ್ಪಷ್ಟವಾಗಿದೆ. ಆ ರಾಜ್ಯದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಒಂದುಗೂಡಿ ಸ್ಪರ್ಧಿಸಿದ್ದರಿಂದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಯಿತು. ಆದ್ದರಿಂದಲೇ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವ ನೆಪದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ನಿಂದ ಹಿಡಿದು ಮಾರ್ಕ್ಸ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ವರೆಗೆ ಎಲ್ಲಾ ಪಕ್ಷದ ನಾಯಕರು ಪಾಲ್ಗೊಂಡು ಕೈ ಕೈ ಹಿಡಿದು ಏಕತೆಯನ್ನು ಪ್ರದರ್ಶನ ಮಾಡಿದರು. ಪ್ರಾದೇಶಿಕ ಪಕ್ಷಗಳ ಜೊತೆಗೆ ಕಾಂಗ್ರೆಸ್ ಪಕ್ಷವೂ ಕೂಡ ಈ ಏಕತೆಯ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು.
ಕೇಂದ್ರದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ಶಾ ಪದೇ ಪದೇ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಮುಕ್ತ ಎಂದು ಹೇಳುತ್ತಿದ್ದರೂ ಪ್ರತಿಪಕ್ಷ ಮುಕ್ತ ಭಾರತ ಹಾಗೂ ಪ್ರಜಾಪ್ರಭುತ್ವ ಮುಕ್ತ ಭಾರತ ಅವರ ಹೆಬ್ಬಯಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ತಮಗೆ ಎದುರಾಳಿಗಳೇ ಇರಬಾರದು ಎಂಬ ಮನೋಭಾವ ಅವರಲ್ಲಿದೆ. ಅಂತಲೇ ಅವರು ಕಾಂಗ್ರೆಸ್ನ್ನು ಮಾತ್ರ ಗುರಿಯಾಗಿಟ್ಟುಕೊಂಡಿಲ್ಲ. ಪ್ರಾದೇಶಿಕ ಪಕ್ಷಗಳನ್ನೂ ರಾಜಕೀಯ ರಂಗದಿಂದ ಕಣ್ಮರೆ ಮಾಡುವ ಗುರಿ ಅವರಿಗಿದೆ. ತ್ರಿಪುರಾದಲ್ಲಿ ಅವರು ಸಿಪಿಎಂನಿಂದ ಅಧಿಕಾರ ಕಿತ್ತುಕೊಂಡ ರೀತಿ, ಗೋವಾದಲ್ಲಿ ಬಹುಮತ ಇಲ್ಲದಿದ್ದರೂ ಅಧಿಕಾರ ವಶಪಡಿಸಿಕೊಂಡ ರಾಜಕೀಯ ಅನೈತಿಕತೆ, ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳನ್ನು ಮುಗಿಸಲು ನಡೆಸಿದ ಯತ್ನ, ಈಶಾನ್ಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮೂಲೆಗುಂಪು ಮಾಡಿದ ರೀತಿ ಇದೆಲ್ಲಾ ಬಿಜೆಪಿಯ ಸರ್ವಾಧಿಕಾರ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಪ್ರತಿಪಕ್ಷಗಳ ಪಾಲಿಗೆ ಮುಂಬರುವ ಲೋಕಸಭಾ ಚುನಾವಣೆ ಬರೀ ಸೋಲು ಗೆಲುವಿನ ಪ್ರಶ್ನೆಯಲ್ಲ. ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸುವ ಇಂಗಿತ ವ್ಯಕ್ತಪಡಿಸಿದೆ. ನರೇಂದ್ರ ಮೋದಿ-ಅಮಿತ್ ಶಾ ಜೋಡಿಗೆ ಆರೆಸ್ಸೆಸ್ ಆಶೀರ್ವಾದವಿದೆ. ಸಂಘಪರಿವಾರದ ಹಿಂದೂ ರಾಷ್ಟ್ರದ ಗುರಿ ಸಾಧಿಸಲು ಅವರಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇದೆ. ಕಾರ್ಪೊರೇಟ್ ಲಾಬಿಗೂ ಕೂಡ ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವದಲ್ಲಿರುವುದು ಬೇಕಾಗಿದೆ. ಮೋದಿ ಸರಕಾರ ಅಸ್ತಿತ್ವದಲ್ಲಿದ್ದರೆ ತಮ್ಮ ಹಿತಾಸಕ್ತಿಯನ್ನು ಸುಲಭವಾಗಿ ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಕಾರ್ಪೊರೇಟ್ ಕಂಪೆನಿಗಳು ನಂಬಿವೆ. ಕಾರ್ಪೊರೇಟ್ ಬಂಡವಾಳಶಾಹಿ ಹಾಗೂ ಕೋಮುವಾದಿಗಳ ಅಪವಿತ್ರ ಮೈತ್ರಿಗೆ ಕೇಂದ್ರದ ಮೋದಿ ಸರಕಾರದ ಬದಲಾವಣೆ ಬೇಕಾಗಿಲ್ಲ. ಇದಕ್ಕೆ ಪ್ರತಿಯಾಗಿ ಕಾರ್ಪೊರೇಟ್ ಲೂಟಿಗೆ ಪ್ರತಿರೋಧವಿಲ್ಲದ ವ್ಯವಸ್ಥೆ ಅವರಿಗೆ ಬೇಕಾಗಿದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ.
ಈ ರೀತಿ ವಿಜಯೋತ್ಸಾಹದಿಂದ ಹೊರಟಿರುವ ನರೇಂದ್ರ ಮೋದಿಯ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕುವುದು ಪ್ರತಿಪಕ್ಷಗಳಿಗೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಪಕ್ಷ ಒಂದರಿಂದಲೇ ಇದು ಸಾಧ್ಯವಾಗುವುದಿಲ್ಲ. ಈ ಅರಿವು ಕಾಂಗ್ರೆಸ್ ನಾಯಕರಲ್ಲೂ ಮೂಡಿದೆ. ಅಂದರೆ ಕರ್ನಾಟಕ ವಿಧಾನಸಭೆ ಫಲಿತಾಂಶ ಬಂದಾಗ ಅತಂತ್ರ ವಿಧಾನಸಭೆಯ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ನೇರವಾಗಿ ಸಂಪರ್ಕಿಸಿ 37 ಸ್ಥಾನಗಳನ್ನು ಗೆದ್ದ ಆ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಾಗಿ ಹೇಳಿತ್ತು. ಇದಕ್ಕೆ ದೇವೇಗೌಡರು ತಕ್ಷಣ ಸ್ಪಂದಿಸಿದರು. ಆನಂತರ ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳನ್ನೂ ಸಂಪರ್ಕಿಸಿ ಬೆಂಗಳೂರಿನ ಪ್ರಮಾಣವಚನ ಸಮಾರಂಭದಲ್ಲಿ ಎಲ್ಲಾ ನಾಯಕರು ಪಾಲ್ಗೊಳ್ಳುವಂತೆ ಮಾಡಿದರು.
ಕಳೆದ 2014ನೇ ಲೋಕಸಭಾ ಚುನಾವಣೆಯಲ್ಲಿ ಅನೇಕ ಕಡೆ ಬಿಜೆಪಿ ಗೆಲುವಿಗೆ ಪ್ರತಿಪಕ್ಷಗಳ ಒಡಕು ಕಾರಣವಾಗಿದೆ. ಉತ್ತರ ಪ್ರದೇಶವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಅಲ್ಲಿ ಬಿಎಸ್ಪಿ ಮತ್ತು ಸಮಾಜವಾದಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ 73 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಪ್ರತಿಪಕ್ಷಗಳು ಒಂದುಗೂಡಿದ್ದರೆ ಈ ಗೆಲುವು ಸಾಧ್ಯವಾಗುತ್ತಿರಲಿಲ್ಲ ಎಂಬುದು ಇತ್ತೀಚೆಗೆ ಆ ರಾಜ್ಯದಲ್ಲಿ ನಡೆದ 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಅದೇ ರೀತಿ ಮಹಾರಾಷ್ಟ್ರದ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಗಳು ಮೈತ್ರಿ ಮಾಡಿಕೊಂಡು 48 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 23 ಹಾಗೂ ಶಿವಸೇನೆ 18 ಸ್ಥಾನಗಳನ್ನು ಗೆದ್ದಿದ್ದವು. ಆಗ ಆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ಅವರ ಎನ್ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈ ಬಾರಿ ಬಿಜೆಪಿಯೇತರ ಪಕ್ಷಗಳು ಒಂದುಗೂಡುವುದರಿಂದ ಮಹಾರಾಷ್ಟ್ರದಲ್ಲಿ ಕೂಡ ಬಿಜೆಪಿ ಗೆಲುವು ಅಷ್ಟು ಸುಲಭವಲ್ಲ. ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಕ್ಷ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಈಗ ತೆಲುಗುದೇಶಂ ಪಕ್ಷ ಬಿಜೆಪಿ ವಿರುದ್ಧ ಸಿಡಿದು ನಿಂತಿದೆ. ಈ ಬಾರಿ ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಮತ್ತು ಎಡಪಕ್ಷಗಳು ಹೊಂದಾಣಿಕೆ ಮಾಡಿಕೊಳ್ಳುವ ಸಂಭವವಿದೆ. ಆದ್ದರಿಂದ ಅಲ್ಲೂ ಬಿಜೆಪಿ ಗೆಲುವು ಸುಲಭವಲ್ಲ.
ಇಷ್ಟೆಲ್ಲಾ ಇದ್ದರೂ ಪ್ರತಿಪಕ್ಷಗಳ ಏಕತೆಯಲ್ಲಿ ಕೆಲವು ಸಮಸ್ಯೆ ಇದೆ. ಕೇರಳದಲ್ಲಿ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪ್ರಮುಖ ಎದುರಾಳಿಗಳಾಗಿವೆ. ಪ.ಬಂಗಾಳದಲ್ಲಿ ಕೂಡ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂಗಳು ಎದುರಾಳಿಗಳಾಗಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದರೂ ಮುಂಬರುವ ಲೋಕಸಭಾ ಚುನಾವಣೆಯವರೆಗೆ ಈ ಮೈತ್ರಿಯನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳ ಬಗ್ಗೆ ಉದಾರವಾದ ಧೋರಣೆ ತಾಳಿದರೆ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಭದ್ರವಾದ ಅಡಿಪಾಯದಲ್ಲಿ ಕಟ್ಟಬಹುದಾಗಿದೆ. ಈ ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಂದುಗೂಡಿ ಕೇಂದ್ರದಲ್ಲಿ ಯುಪಿಎ ಸರಕಾರವನ್ನು ರಚಿಸಿರುವುದು ಉದಾಹರಣೆಯಿದೆ. ಈ ಬಾರಿ ಕೂಡ ಲೋಕಸಭಾ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳು ಒಂದು ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಒಂದುಗೂಡಿ ಸ್ಪರ್ಧಿಸಿದಲ್ಲಿ ಮಾತ್ರ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಲು ಸಾಧ್ಯ.