ಜೀವ ವೈವಿಧ್ಯಗಳ ರಕ್ಷಣೆ ಅಗತ್ಯ
ಮಾನ್ಯರೇ,
ಪ್ರಕೃತಿಯ ಮಡಿಲಲ್ಲಿ ಇರುವ ಭೂಚರ, ಜಲಚರ, ವಾಯುಚರ ಜೀವ ಪ್ರಭೇದಗಳು ವಿನಾಶದಂಚಿಗೆ ತಲುಪುತ್ತಲಿವೆ. ಅದೆಷ್ಟೋ ಜೀವ ವೈವಿದ್ಯಗಳು ಪ್ರಾಕೃತಿಕ ಲೋಕದಿಂದಲೇ ಕಣ್ಮರೆಗೊಂಡಿವೆ. ಇವುಗಳ ಬದುಕುವ ಹಕ್ಕನ್ನು ಮಾನವ ಕಸಿಯುತ್ತಿದ್ದಾನೆ. ಬೇಟೆಯಾಡಿ ಹಿಂಸಿಸುತ್ತಿದ್ದಾನೆ. ಕಾನನ ನಾಶಗೊಳಿಸಿ ನೆಲೆ ಕಬಳಿಸಿದ್ದಾನೆ. ಜೀವನದಿಗಳಲ್ಲಿ ರಸಾಯನಿಕ ವಿಷ ಹರಿದು ಬಿಟ್ಟು, ಜಲಚರಗಳು ಬದುಕದಂತೆ ಮಾಡಿದ್ದಾನೆ. ತನ್ನ ಬದುಕಿಗಾಗಿ ಮಾನವನು ಜೀವಸಂಕುಲದ ನಾಶಕ್ಕೆ ಕಾರಣಕರ್ತನಾಗಿದ್ದಾನೆ. ಇದಲ್ಲದೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ವಲಯದ ರಸ್ತೆಗಳಲ್ಲಿ, ದಿನವೊಂದಕ್ಕೆ ಭಾರತ ದೇಶದಲ್ಲಿ ಸಾವಿರಾರು ಪ್ರಾಣಿಸಂಕುಲ ವಾಹನಗಳ ಚಕ್ರದಡಿ ಸಿಲುಕಿ ದುರಂತದ ಸಾವುಕಾಣುತ್ತಿವೆ. ಬಹುತೇಕವು ಆಕಸ್ಮಿಕ ದುರಂತಗಳು ನಡೆದರೆ, ಕೆಲವು ವಿಕೃತ ಮನಸ್ಸಿನ ಚಾಲಕರು ಜೀವಿಗಳ ಮೇಲೆಯೇ ವಾಹನ ಹಾಯಿಸಿ ವಿಘ್ನಸಂತೋಷವನ್ನು ಅನುಭವಿಸುವರೂ ಇದ್ದಾರೆ.
ವಾಹನದಲ್ಲಿ ಸಂಚರಿಸುವಾಗ ರಸ್ತೆ ಮೇಲೆ ಕಣ್ಣು ಹಾಯಿಸುತ್ತಲೇ ಹೋದಾಗ, ನಮಗೆ ರಸ್ತೆಯ ಉದ್ದಕ್ಕೂ ಹಾವುಗಳು, ಮುಂಗುಸಿ, ಉಡ, ಒತಿಕ್ಯಾತ, ಪಕ್ಷಿಗಳು, ಹೀಗೆ ಹಲವು ಜೀವಜಂತುಗಳು ವಾಹನ ಚಕ್ರದಡಿ ಸಿಲುಕಿ ಅಪ್ಪಚ್ಚಿಗೊಂಡು ಛಿದ್ರವಾದ ಕಳೇಬರಗಳು ಕಾಣಲುಸಿಗುತ್ತವೆ. ಘನ, ಲಘು ವಾಹನ ಚಾಲಕರು ಪರಿಸರಪ್ರಜ್ಞೆ, ಪ್ರಾಣಿದಯೆಗೆ ತಮ್ಮ ಮನಸ್ಸಿನ ಮೂಲೆಯಲ್ಲಿ ಒಂದಿಷ್ಟು ಜಾಗ ನೀಡಿದಲ್ಲಿ, ಪ್ರಾಣಿ ಸಂತತಿ ರಕ್ಷಿಸಲು ಸಾಧ್ಯವಿದೆ. ಜೀವಿಗಳು ರಸ್ತೆಯಲ್ಲಿ ಅಡ್ಡ ಬಂದಾಗ, ನಿಗಾವಹಿಸಿ ವೇಗತಡೆಗೊಳಿಸಿದಾಗ ಜೀವಿಗಳ ಜೀವವನ್ನು ಉಳಿಸಬಹುದು. ಚಾಲಕರು ತಮ್ಮ ಗಮನಕ್ಕೆ ಬಂದ ಜೀವಿಗಳ ಮೇಲಿನ ಅಪಘಾತಗಳನ್ನು ತಪ್ಪಿಸಿದ್ದಲ್ಲಿ ದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಜೀವಜಂತುಗಳು ಬದುಕುತ್ತವೆ.