ಮೈಸೂರಿನಲ್ಲಿ ಜೆಡಿಎಸ್ ಗೆ ಒಲಿದ ಅದೃಷ್ಟ: ಕಾಂಗ್ರೆಸ್ಗಿಲ್ಲ ಮಂತ್ರಿ ಭಾಗ್ಯ
ಮೈಸೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಮೈಸೂರು ಜಿಲ್ಲೆಯ ಜೆಡಿಎಸ್ ಶಾಸಕರಿಗೆ ಒಲಿದ ಅದೃಷ್ಟ ಕಾಂಗ್ರೆಸ್ ಶಾಸಕರಿಗೆ ಇಲ್ಲವಾದಂತಾಗಿದೆ.
ನೂತನ ಸರಕಾರ ರಚನೆಯಲ್ಲಿ ಉಭಯ ಪಕ್ಷಗಳ ಶಾಸಕರಿಗೆ ಮಂತ್ರಿ ಭಾಗ್ಯ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಶೆಯಾಗಿದೆ. ಮೈಸೂರು ಜಿಲ್ಲೆಯ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮೈಲುಗೈ ಸಾಧಿಸಿದೆ. ಜೆಡಿಎಸ್ 5, ಕಾಂಗ್ರೆಸ್ 3 ಮತ್ತು ಬಿಜೆಪಿ 3 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.
ತೀವ್ರ ಕುತೂಹಲ ಮೂಡಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಣಿಸಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಎರಡನೇ ಬಾರಿಗೆ ಮತ್ತು ಕೆ.ಆರ್.ನಗರದಲ್ಲಿ ಹಾಟ್ರಿಕ್ ಗೆಲುವು ಪಡೆದ ಶಾಸಕ ಸಾ.ರಾ.ಮಹೇಶ್ ಇದೇ ಮೊದಲ ಬಾರಿಗೆ ಮಂತ್ರಿಗಳಾಗಿ ಪದಗ್ರಹಣ ಮಾಡಿದ್ದಾರೆ.
ಇನ್ನು ಜಿಲ್ಲೆಯ ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಪ್ರಭಾವಿ ನಾಯಕ ತನ್ವೀರ್ ಸೇಠ್ಗೆ ಮಂತ್ರಿ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಮಂತ್ರಿ ಸ್ಥಾನ ಇಲ್ಲ ಎನ್ನುತಿದ್ದಂತೆ ಇತ್ತ ತನ್ವೀರ್ ಬೆಂಬಲಿಗರು ಬೀದಿಗಿಳಿದು ರಸ್ತೆ ತಡೆ ನಡೆಸಿ ಟೈರ್ಗಳಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಮೈತ್ರಿ ಸರಕಾರವಾಗಿದ್ದರಿಂದ ಜೆಡಿಎಸ್- ಕಾಂಗ್ರೆಸ್ ಪಕ್ಷದಿಂದ ತಲಾ ಇಬ್ಬರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ರಾಜಕೀಯ ಲೆಕ್ಕಾಚಾರ ಬುಡಮೇಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎನ್ನಲಾಗಿತ್ತಾದರೂ ಕೊನೆ ಗಳಿಗೆಯಲ್ಲಿ ಕೈತಪ್ಪಿದೆ. ಮೊದಲ ಬಾರಿ ಶಾಸಕರಾಗಿರುವ ಯತೀಂದ್ರ ಅವರಿಗೆ ಸಚಿವ ಸ್ಥಾನಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಒಲವು ತೋರಿದ್ದರಾದರೂ ಸಿದ್ದರಾಮಯ್ಯ ಮನಸ್ಸು ಮಾಡಲಿಲ್ಲ ಎನ್ನಲಾಗುತ್ತಿದೆ.
ಇನ್ನು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು. ಅವರು ಮಂತ್ರಿ ಸ್ಥಾನದ ಆಸೆ ಇಟ್ಟುಕೊಂಡವರಲ್ಲ ಹಾಗಾಗಿ ಅವರ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ.
ಹುಸಿಯಾದ ನಿರೀಕ್ಷೆ: ಜಿಲ್ಲೆಯ ಹಿರಿಯ ಮುಖಂಡ ಹಾಗೂ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ಗೆ ಸಚಿವ ಸ್ಥಾನ ದೊರಕದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದು ಹಲವಾರು ಖಾತೆಗಳನ್ನು ನಿಭಾಯಿಸಿ ಅನುಭವ ಹೊಂದಿದ್ದ ಅವರಿಗೆ ನಿರಾಯಾಸವಾಗಿ ಸಚಿವ ಸ್ಥಾನ ಒಲಿದು ಬರಲಿದೆ ಎಂದು ಹೇಳಲಾಗುತ್ತಿತ್ತಾದರೂ ಕೊನೆಗಳಿಗೆಯಲ್ಲಿ ಕೈತಪ್ಪಿರುವುದು ನಿರಾಸೆಯುಂಟುಮಾಡಿದೆ.
ಜಿಲ್ಲೆಯ ಜೆಡಿಎಸ್ ಪಕ್ಷದ ಮತ್ತಿಬ್ಬರು ಶಾಸಕಾರದ ಟೀ.ನರಸೀಪುರದ ಅಶ್ವಿನ್ ಕುಮಾರ್ ಮತ್ತು ಪಿರಿಯಾಪಟ್ಟಣದ ಕೆ.ಮಹದೇವ್ ಪ್ರಥಮ ಬಾರಿಗೆ ಶಾಸಕರಾಗಿದ್ದಾರೆ. ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಸಚಿವ ಸ್ಥಾನ ದೊರಕದಿರುವುದು ಆತಂಕಕ್ಕೀಡು ಮಾಡಿದೆ. ಸಿದ್ದರಾಮಯ್ಯ ಸಾಕಷ್ಟು ಅಭಿವೃದ್ಧಿ ಮಾಡಿ ವಿಶೇಷವಾಗಿ ಜಿಲ್ಲೆಗೆ ಹೆಚ್ಚು ಅನುದಾನ ನೀಡಿದ್ದರೂ ಕಾಂಗ್ರೆಸ್ ಸೋಲು ಕಂಡಿರುವುದು ನಾಯಕರಲ್ಲಿ ಬೇಸರ ಉಂಟುಮಾಡಿದ್ದು, ಹಾಗಾಗಿ ಸಚಿವ ಸ್ಥಾನ ದೊರಕಿಲ್ಲ ಎಂದು ಹೇಳಲಾಗುತ್ತಿದೆ.