ಆಧಾರ್: ಎಷ್ಟು ಸುರಕ್ಷಿತ?
ಸತ್ಯಕ್ಕೆ ಕನ್ನಡಿ
ಮೊದಲಿನಿಂದಲೂ ಈ ಅನುಮಾನ ಇದ್ದೇ ಇತ್ತು: ಸರಕಾರಕ್ಕೆ ನಾವು ಸಲ್ಲಿಸಿದ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿಲ್ಲ ಎಂದು. ಕೋರ್ಟುಗಳಲ್ಲಿ ಇದಿನ್ನೂ ಚರ್ಚೆಯಲ್ಲಿರುವಾಗ, ಹಲವಾರು ರಾಜ್ಯ ಸರಕಾರಗಳು ರೇಷನ್ ಕಾರ್ಡ್ಗೆ ಆಧಾರ್ ಸಂಪರ್ಕ ಇಲ್ಲ ಎಂಬ ಕಾರಣಕ್ಕೆ ಕಾರ್ಡುಗಳನ್ನು ರದ್ದು ಮಾಡಿವೆ. ಇದರ ಪರಿಣಾಮವಾಗಿ ಕಳೆದ 8 ತಿಂಗಳಲ್ಲಿ ಜಾರ್ಖಂಡ್ನಲ್ಲಿ 12ಕ್ಕೂ ಹೆಚ್ಚು ಜನ ಕೂಳಿಲ್ಲ ಎಂಬ ಕಾರಣಕ್ಕೆ ಮೃತಪಟ್ಟಿದ್ದಾರೆ. ಇಷ್ಟಕ್ಕೂ ಈ ಆಧಾರ್ ಎಂಬುದು ಭಾರತೀಯನ ಅಸ್ಮಿತೆಯನ್ನು ಸಾಬೀತು ಪಡಿಸಲು ಇರುವ ಏಕೈಕ ಸಾಧನವೇ? ಆಧಾರ್ನಲ್ಲಿ ಲೋಪಗಳೇ ಇಲ್ಲವೇ?
ಮಿಥ್ಯೆ: ಆಧಾರ್, ಬ್ಯಾಂಕ್ ಖಾತೆ, ಡಿಜಿಟಲ್ ವ್ಯವಹಾರಗಳಿಗೆ ಸಲ್ಲಿಸಿದ ನಾಗರಿಕರ ವೈಯಕ್ತಿಕ ಮಾಹಿತಿಗಳು ಸುರಕ್ಷಿತವಾಗಿವೆ.
ಸತ್ಯ: ಖಂಡಿತ ಇಲ್ಲ. ಏಕೆಂದರೆ ಈ ಹಿಂದೆ ಪತ್ರಕರ್ತೆಯೊಬ್ಬರು ಆಧಾರ್ ಮಾಹಿತಿ ಹೇಗೆ ಸೋರುತ್ತಿದೆ ಎಂಬುದನ್ನು ಸ್ಟಿಂಗ್ ಆಪರೇಷನ್ನಲ್ಲಿ ಬಯಲು ಮಾಡಿದ್ದರು. ಈಗ ಅಂತರ್ಜಾಲ ತನಿಖಾ ಮಾಧ್ಯಮ ಕೋಬ್ರಾಪೋಸ್ಟ್ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ ಪ್ರಧಾನಮಂತ್ರಿಯವರ ಕಚೇರಿಯೇ ದೇಶದ ಜನಪ್ರಿಯ ಮೊಬೈಲ್ ವಾಲೆಟ್ ಕಂಪನಿ ಪೇಟಿಎಂನಿಂದ ನಾಗರಿಕರ ವೈಯಕ್ತಿಕ ಮಾಹಿತಿ ಪಡೆದಿತ್ತು ಎಂಬುದು ಬಯಲಾಗಿದೆ. ಟೈಮ್ಸ್ ಗ್ರೂಪ್ನ ಇಕನಾಮಿಕ್ಸ್ ಟೈಮ್ಸ್ ಈ ಸುದ್ದಿಯನ್ನು ‘ಪೇಟಿಎಂ= ಪೇ-ಟು-ಪಿಎಂ’ ಎಂಬ ಉಪಶೀರ್ಷಿಕೆಯಲ್ಲ್ಲಿ ವರದಿ ಮಾಡಿತ್ತು. ಆದರೆ ಥಟ್ಟಂತ ಅದನ್ನು ವೆಬ್ಸೈಟ್ನಿಂದ ಡಿಲೀಟ್ ಮಾಡಿತು. ಬಹುಪಾಲು ಮಾಧ್ಯಮಗಳಿಗೆ ಇದು ಮುಖ್ಯ ವಿಷಯ ಎನಿಸಲೇ ಇಲ್ಲ.
ಪೇಟಿಎಂ ಸಂಸ್ಥಾಪಕ ವಿಜಯ ಶರ್ಮಾರ ಸಹೋದರ, ಪೇಟಿಎಂನ ಹಿರಿಯ ಉಪಾಧ್ಯಕ್ಷ ಅಜಯ ಶರ್ಮಾ, ‘‘ಕಳೆದ ವರ್ಷ ಪ್ರಧಾನಿ ಕಚೇರಿಯು ಕಾಶ್ಮೀರದ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ನೀಡುವಂತೆ ಕೇಳಿತ್ತು. ಅಲ್ಲಿ ಪೊಲೀಸರು ಮತ್ತು ಸೇನಾಪಡೆಗಳ ಮೇಲೆ ಕಲ್ಲು ತೂರುವವರನ್ನು ಪತ್ತೆ ಹಚ್ಚಲು ಈ ಮಾಹಿತಿ ಬೇಕು ಎಂದಿತ್ತು’’ ಎಂದು ಹೇಳುವ ವೀಡಿಯೊವನ್ನು ಕೋಬ್ರಾಪೋಸ್ಟ್ ಸ್ಟಿಂಗ್ ಆಪರೇಷನ್ ಬಯಲು ಮಾಡಿದೆ.
ಇಲ್ಲಿ ಪೇಟಿಎಂನ ಹೊಣೆಗೇಡಿತನ ಒಂದೆಡೆಯಾದರೆ, ಇನ್ನೊಂದೆಡೆ ಪ್ರಧಾನಿ ಕಾರ್ಯಾಲಯ ತನ್ನ ದೇಶದ ಜನರ ಮೇಲೆ ಗೂಢಚರ್ಯ ನಡೆಸಿ, ಅವರನ್ನು ಶಿಕ್ಷಿಸಲು ತಾನೇ ಕಾಯ್ದೆ ಮುರಿದಿರುವುದು. ದೈತ್ಯ ಮಾಧ್ಯಮಗಳು ಈ ಸ್ಟಿಂಗ್ ಆಪರೇಷನ್ ವಿಷಯವನ್ನು ಬೇಕೆಂದೇ ಕಡೆಗಣಿಸಿವೆ. ಪ್ರಧಾನಿಯೊಂದಿಗೆ, ಬಿಜೆಪಿಯೊಂದಿಗೆ ಸಖ್ಯ ಹೊಂದಿರುವ ಅವು ಕೋಟ್ಯಂತರ ರೂಪಾಯಿಗಳ ಜಾಹೀರಾತುಗಳ ಋಣದಲ್ಲಿ ಮಾಧ್ಯಮ ನೈತಿಕತೆಯನ್ನೇ ಗಾಳಿಗೆ ತೂರುತ್ತಿವೆ.
ಟೈಮ್ಸ್ ಬಳಗವಂತೂ ಪ್ರಧಾನಿಗೆ ಮುಜುಗರ ಆಗಬಹುದಾದ ವಿಷಯಗಳನ್ನು ಪ್ರಕಟಿಸಲು ಹಿಂಜರಿಯುತ್ತಿದೆ. ಮಾಧ್ಯಮಗಳು ಬಿಜೆಪಿ ಪರ ಕೆಲಸ ಮಾಡಲು ಕಾಸು ಪಡೆಯಲು ಒಪ್ಪಿದ ಸ್ಟಿಂಗ್ ಆಪರೇಷನ್ ಅನ್ನು ಕೂಡ ದೊಡ್ಡ ಮಾಧ್ಯಮಗಳು ನಿರ್ಲಕ್ಷಿಸಿದ್ದನ್ನು ಇಲ್ಲ್ಲಿ ನೆನೆಯಬಹುದು
ಕಳೆದ ವರ್ಷವೂ ಇಕನಾಮಿಕ್ ಟೈಮ್ಸ್ ಮೂರು ಸ್ಟೋರಿಗಳನ್ನು ಹೀಗೆ ಹಾಕಿ, ನಂತರ ಯಾವುದೇ ಕಾರಣ ನೀಡದೇ ವಾಪಸ್ ಪಡೆದಿತ್ತು. ಅಮಿತ್ ಶಾ ಆಸ್ತಿ ಕುರಿತಾದ ಸ್ಟೋರಿ, ಜವಳಿ ಸಚಿವೆ ಸ್ಮತಿ ಇರಾನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ತನಿಖೆಗೆ ಕೋರಿ ಹಾಕಿದ್ದ ಪಿಐಎಲ್ ಕುರಿತ ಸುದ್ದಿ ಮತ್ತು ಮೋದಿ ಸರಕಾರದ ಬೆಳೆವಿಮೆ ಯೋಜನೆ ಟೀಕಿಸಿದ ಸ್ಟೋರಿ- ಈ ಮೂರನ್ನೂ ವೆಬ್ ಸೈಟ್ನಲ್ಲಿ ಹಾಕಿದ ಬೆನ್ನಲ್ಲೇ ಹಿಂಪಡೆದಿತ್ತು. ಈಗ ಪಿಎಂಒ ಕುರಿತ ಸುದ್ದಿಗೂ ಅದೇ ಗತಿ ಬಂದಿದೆ. ಬಿಜೆಪಿಯೊಂದಿಗೆ ಅದೆಂತಹ ವ್ಯವಹಾರವನ್ನು ಹೊಸೆದಿರಬಹುದು ಎಂಬ ಸಂಶಯ ನಮ್ಮದು.