ಸಿದ್ದರಾಮಯ್ಯ ಭದ್ರತೆ ನೀಡದಿದ್ದರೆ ನಾನು ಬದುಕಿರುತ್ತಿರಲಿಲ್ಲ: ಸಾಹಿತಿ ಪ್ರೊ.ಕೆ.ಎಸ್.ಭಗವಾನ್
ಮೈಸೂರು,ಜೂ.13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಭದ್ರತೆ ನೀಡದಿದ್ದರೆ ನಾನು ಇಂದು ಬದುಕಿರುತ್ತಿರಲಿಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದ್ದಾರೆ.
ನಗರದಲ್ಲಿ ಸುದ್ಧಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನನ್ನ ಹತ್ಯೆಗೂ ಪ್ಲಾನ್ ಮಾಡಿಕೊಂಡ ಬಗ್ಗೆ ಗೊತ್ತಾಗಿತ್ತು. ಹೊಟ್ಟೆ ಮಂಜ, ನವೀನ್ ಇಬ್ಬರು ಪ್ಲಾನ್ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲೇ ಓಡಾಡಿದ್ದರು. ನನಗೆ ಸಿದ್ದರಾಮಯ್ಯ ಭದ್ರತೆ ನೀಡಿದ್ದರಿಂದ ನನ್ನನ್ನು ಏನೂ ಮಾಡಲು ಆಗಲಿಲ್ಲ. ಒಂದು ವೇಳೆ ಭದ್ರತೆ ಇಲ್ಲದಿದ್ದರೆ ನನ್ನನ್ನು ಸಾಯಿಸಿ ಬಿಡುತ್ತಿದ್ದರು. ಅದಕ್ಕಾಗಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಎಸ್ಐಟಿ ತಂಡ ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದ ಹಿನ್ನಲೆಯಲ್ಲಿ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹಂತಕರನ್ನು ಬಂಧಿಸಲು ಸಾಧ್ಯವಾಗಿದೆ. ಏನೂ ತಪ್ಪು ಮಾಡದ ಹೆಣ್ಣು ಮಗಳನ್ನು ಕೊಂದು ಹಾಕಿದ್ದರು. ಗೌರಿ ಓರ್ವ ದಿಟ್ಟ ಹಾಗೂ ಮಾದರಿ ಮಹಿಳೆ. ಅವಳನ್ನು ಕೊಲೆ ಮಾಡಿದ್ದು, ನನಗೆ ಬೇಸರವೆನಿಸಿತ್ತು. ಈಗ ಗೌರಿ ಹಂತಕರನ್ನು ಬಂಧಿಸಿರುವುದು ಸಂತಸವಾಗಿದೆ ಎಂದರು.
ನನ್ನ ಹತ್ಯೆಗೂ ಪ್ಲಾನ್ ಮಾಡಿದ್ದವರನ್ನು ಎಸ್.ಐ.ಟಿ. ಅಧಿಕಾರಿಗಳು ಬಂಧಿಸಿದ್ದಾರೆ. ಎಸ್ಐಟಿ ಕೆಲಸ ಹೆಮ್ಮೆಯ ಕೆಲಸವಾಗಿದೆ. ಇದೊಂದು ದೇಶಕ್ಕೆ ಮಾದರಿಯಾದ ಸಂಸ್ಥೆ. ಹಾಗಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.