ವಾಜಪೇಯಿ ಆರೋಗ್ಯಸ್ಥಿತಿ ಸುಧಾರಣೆ
ಹೊಸದಿಲ್ಲಿ, ಜೂ.13: ಅನಾರೋಗ್ಯಕ್ಕೆ ಒಳಗಾಗಿ ಕಳೆದ ಎರಡು ದಿನಗಳ ಹಿಂದೆ ಎಐಐಎಂಎಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯಸ್ಥಿತಿ ಗಮನಾರ್ಹವಾಗಿ ಸುಧಾರಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ಸಂಪೂರ್ಣ ಸ್ವಸ್ಥರಾಗುವ ವಿಶ್ವಾಸವಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಕಿಡ್ನಿ ಮತ್ತು ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಅವರಿಗೆ ಮೂತ್ರವಿಸರ್ಜನೆಯ ಸಮಸ್ಯೆಯಿತ್ತು. ಈ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸಲಾಗಿದೆ.ಇದೀಗ ಸೋಂಕಿನ ಸಮಸ್ಯೆಯನ್ನು ನಿಯಂತ್ರಿಸಲಾಗಿದೆ. ಜೊತೆಗೆ ರಕ್ತದೊತ್ತಡ ಮತ್ತು ಹೃದಯ ಬಡಿತ ಕೂಡಾ ಸಾಮಾನ್ಯ ಮಟ್ಟದಲ್ಲಿದೆ. ಮುಂದಿನ ಕೆಲ ದಿನಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗುವ ವಿಶ್ವಾಸವಿದೆ ಎಂದು ಗುಲೇರಿಯಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮುಂತಾದ ಪ್ರಮುಖ ರಾಜಕೀಯ ಮುಖಂಡರು ಕಳೆದೆರಡು ದಿನಗಳಿಂದ ಆಸ್ಪತ್ರೆಗೆ ತೆರಳಿ ವಾಜಪೇಯಿಯವರನ್ನು ಭೇಟಿಯಾಗಿದ್ದಾರೆ.