ವಿಶಿಷ್ಟ ರೀತಿಯಲ್ಲಿ ಪೆರ್ನಾಳ್ ಆಚರಣೆ
ಈದುಲ್ ಫಿತ್ರ್ ಸವಿ ನೆನಪುಗಳು!
ನಾನು ಕೆಲವು ಸಮಯದಿಂದ ವಿಶಿಷ್ಟ ರೀತಿಯಲ್ಲೇ ಪೆರ್ನಾಳ್ ಆಚರಿಸುತ್ತಿದ್ದೇನೆ. ಪೆರ್ನಾಳ್ ನಮಾಝ್ ಮುಗಿದ ತಕ್ಷಣ ತಂದೆಯ ‘ಖಬರ್ ಝಿಯಾರತ್’ ಮಾಡಿದ ಬಳಿಕ ನೇರ ಗುರುಪುರ ಕೈಕಂಬದ ‘ಸ್ನೇಹಸದನ ಮತ್ತು ಜೀವದಾನ’ ಎಂಬ ಏಡ್ಸ್ಪೀಡಿತ ಮಕ್ಕಳ ಪುನರುಜ್ಜೀವನ ಸಂಸ್ಥೆಗೆ ಹಾಗೂ ಬಂಟ್ವಾಳ ತಾಲೂಕಿನ ಬಂಡಾಡಿಯಲ್ಲಿರುವ ಅನಾಥಾಶ್ರಮಕ್ಕೆ ತೆರಳಿ ಅವರೊಂದಿಗೆ ಪೆರ್ನಾಳ್ನ ಸಂಭ್ರಮ ಸವಿಯಲಿದ್ದೇನೆ. ಈ ಸಂಸ್ಥೆಗಳಲ್ಲಿ ಸುಮಾರು 200ಕ್ಕೂ ಅಧಿಕ ಮಕ್ಕಳಿದ್ದಾರೆ. ಈಗಾಗಲೆ ಇಲ್ಲಿ ಇಫ್ತಾರ್ನ ವ್ಯವಸ್ಥೆ ಮಾಡಲಾಗಿದೆ.
ಇನ್ನು ನನ್ನ ಮನೆಯಲ್ಲಿ ತಾಯಿ ಇರುವ ಕಾರಣ ನನ್ನೆಲ್ಲಾ ಕುಟುಂಬಸ್ಥರು ಅಂದು ನನ್ನ ಮನೆಗೆ ಬರುತ್ತಾರೆ. ಹಾಗಾಗಿ ಪೆರ್ನಾಳ್ನಂದು ನಮ್ಮ ಮನೆಯಲ್ಲೇ ಕುಟುಂಬ ಸಮ್ಮಿಲನ ನಡೆಯಲಿದೆ. ಇದರೊಂದಿಗೆ ಹಿಂದೂ, ಕ್ರೈಸ್ತ, ಜೈನ ಹೀಗೆ 50ಕ್ಕೂ ಅಧಿಕ ಇತರ ಸಮುದಾಯದವರು ಬರುತ್ತಾರೆ. ಅವರೊಂದಿಗೂ ನಾವೆಲ್ಲಾ ಸೌಹಾರ್ದದ ಹಬ್ಬ ಆಚರಿಸುತ್ತೇವೆ.
ಈ ಮಧ್ಯೆ ‘ನಂಡೆ ಪೆಂಙಳ್’ ಅಭಿಯಾನದ ಭಾಗವಾಗಿ ಒಂದೇ ಮನೆಯಲ್ಲಿ 30 ವರ್ಷ ಪ್ರಾಯ ದಾಟಿದ ಇಬ್ಬರು ಸಹೋದರಿಯರಿಗೆ ಪೆರ್ನಾಳ್ನಂದು ಚಿನ್ನಾಭರಣ ಹಸ್ತಾಂತರಿಸುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಹಬ್ಬದ ನೆಪದಲ್ಲಿ ನಗರ, ಬೀಚ್ ಸುತ್ತಾಡುವುದಕ್ಕಿಂತ ಇಂತಹ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪರಿಪಾಠ ಬೆಳೆಸುವುದು ಉತ್ತಮ.
ನೌಷಾದ್ ಹಾಜಿ ಸೂರಲ್ಪಾಡಿ
ಅಧ್ಯಕ್ಷರು, ಸ್ವಾಗತ ಸಮಿತಿ, ನಂಡೆ ಪೆಂಙಳ್ ಅಭಿಯಾನ