ಗ್ರೂಪ್ ಫೋಟೊಕ್ಕೆ ಅಫ್ಘಾನಿಸ್ತಾನ ಆಟಗಾರರನ್ನು ಆಹ್ವಾನಿಸಿದ ರಹಾನೆ
ಭಾರತದ ಹಂಗಾಮಿ ನಾಯಕನ ಕ್ರೀಡಾಸ್ಫೂರ್ತಿಗೆ ಭಾರೀ ಮೆಚ್ಚುಗೆ
ಬೆಂಗಳೂರು, ಜೂ.16: ಭಾರತ ತಂಡ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಎರಡೇ ದಿನದಲ್ಲಿ ಇನಿಂಗ್ಸ್ ಹಾಗೂ 262 ರನ್ಗಳ ಅಂತರದಿಂದ ಗೆದ್ದುಕೊಂಡಿದೆ.
ಪಂದ್ಯ ಕೊನೆಗೊಂಡ ಬಳಿಕ ಭಾರತದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಟ್ರೋಫಿಯೊಂದಿಗೆ ಗ್ರೂಪ್ ಫೋಟೊ ತೆಗೆಯಲು ತಮ್ಮೋಂದಿಗೆ ಸೇರುವಂತೆ ಅಫ್ಘಾನಿಸ್ತಾನದ ನಾಯಕ ಅಸ್ಘರ್ ಸ್ಟಾನಿಕ್ ಝೈ ಹಾಗೂ ಇತರ ಆಟಗಾರರನ್ನು ಆಹ್ವಾನಿಸಿದರು. ಅಫ್ಘಾನಿಸ್ತಾನ ಆಟಗಾರರ ಕೈಗೆ ಟ್ರೋಫಿ ನೀಡಿ ನೈತಿಕ ಸ್ಥೈರ್ಯ ಹೆಚ್ಚಿಸಿದರು. ರಹಾನೆ ತನ್ನ ಈ ನಡವಳಿಕೆಯ ಮೂಲಕ ಎಲ್ಲರ ಹೃದಯ ಗೆಲ್ಲಲು ಯಶಸ್ವಿಯಾಗಿದ್ದಾರೆ.
ರಹಾನೆ ಅಫ್ಘಾನಿಸ್ತಾನದ ಆಟಗಾರರನ್ನು ಗ್ರೂಪ್ ಫೋಟೊಕ್ಕೆ ಆಹ್ವಾನಿಸಿರುವ ನಿರ್ಧಾರವನ್ನು ಶ್ಲಾಘಿಸಿರುವ ಬಿಸಿಸಿಐ, ಗ್ರೂಪ್ ಫೋಟೊದ ವಿಡಿಯೋವನ್ನು ಟ್ವಿಟರ್ ಪೇಜ್ನಲ್ಲಿ ಹಾಕಿದೆ.
ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹಾಗೂ ಕೇಂದ್ರ ಕ್ರೀಡಾ ಸಚಿವರಾದ ರಾಜ್ಯವರ್ಧನ್ ರಾಥೋಡ್ ಬಿಸಿಸಿಐ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಅದ್ಭುತ ಕ್ರೀಡಾಸ್ಫೂರ್ತಿ ಬ್ರದರ್' ಎಂದು ಪೀಟರ್ಸನ್ ಪ್ರತಿಕ್ರಿಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಹಾನೆ, ‘‘ಅಫ್ಘಾನಿಸ್ತಾನಕ್ಕೆ ಶ್ರೇಯಸ್ಸು ಸಲ್ಲಬೇಕಾಗಿದೆ. ಆ ತಂಡದ ವೇಗದ ಬೌಲರ್ಗಳು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ'' ಎಂದರು.