ಕಾಂಗ್ರೆಸಿಗರ ಕಿರುಕುಳದಿಂದಲೇ ನನಗೆ ಸಚಿವ ಸ್ಥಾನ ಕೈತಪ್ಪಿತು : ಬಸವರಾಜ ಹೊರಟ್ಟಿ
ಧಾರವಾಡ, ಜೂ. 16: ‘ಮೈತ್ರಿಕೂಟ ಸರಕಾರದಲ್ಲಿ ಕಾಂಗ್ರೆಸಿಗರ ಕಿರುಕುಳ ಹೀಗೆ ಮುಂದುವರಿಸಿದರೆ ಈ ಸರಕಾರ 5ವರ್ಷ ಪೂರೈಸುವುದಿಲ್ಲ. ಲಿಂಗಾಯತ ಶಾಸಕರನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡಿದೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಎಚ್ಡಿಕೆ ಆಸಕ್ತಿ ವಹಿಸಿದ್ದಾರೆ. ಆದರೆ, ಕಾಂಗ್ರೆಸಿಗರ ಕಿರುಕುಳದಿಂದಲೇ ನನಗೂ ಸಚಿವ ಸ್ಥಾನ ಕೈತಪ್ಪಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಯಾವುದೇ ಷರತ್ತಿಲ್ಲದೆ ಬೆಂಬಲಿಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಇದೀಗ ದಿನಕ್ಕೊಂದು ಷರತ್ತು ವಿಧಿಸುತ್ತಿದೆ. ಹೀಗಾಗಿ ಕುಮಾರಸ್ವಾಮಿಗೆ ಮುಕ್ತ ವಾತಾವರಣ ಇಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸಿಗರ ಕಿರುಕುಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿನ್ನೆ ‘ಒಂದು ವರ್ಷ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ ಎಂದ ಅವರು, ಸಚಿವ ಸ್ಥಾನ ಕೈತಪ್ಪಿದಕ್ಕೆ ನಮಗೆ ಅಸಮಾಧಾನವಿಲ್ಲ. ಆದರೆ, ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲದಂತಾಗಬಾರದು. ಲಿಂಗಾಯತ ಹೋರಾಟಗಾರರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.