ಅಕ್ಕನ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿದೆ: ಕವಿತಾ ಲಂಕೇಶ್
ಬೆಂಗಳೂರು, ಜೂ.16: ಪತ್ರಕರ್ತೆಯಾದ ನನ್ನ ಅಕ್ಕ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದು, ನನ್ನ ಅಕ್ಕನ ಸಾವಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಕವಿತಾ ಲಂಕೇಶ್ ತಿಳಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೆ ಪ್ರಕರಣದಲ್ಲಿ ನೇರವಾಗಿ ಭಾಗಿಗಳಾದ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದು ತನಿಖೆಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಿಸಿದರು.
ಎಸ್ಐಟಿ ಅಧಿಕಾರಿಗಳು ನನ್ನನ್ನು ಒಳಗೊಂಡಂತೆ, ಗೌರಿ ಲಂಕೇಶ್ಗೆ ಸಂಪರ್ಕವಿದ್ದ ಎಲ್ಲರ ಜೊತೆಗೆ ವಿಚಾರಣೆ ನಡೆಸಿದ್ದಾರೆ. ನಕ್ಸಲ್ ಹಿನ್ನೆಲೆಯಿಂದಲೂ ವಿಚಾರ ನಡೆಸಿ, ಅಂತಿಮವಾಗಿ ಗೌರಿಲಂಕೇಶ್ಗೆ ನೇರವಾಗಿ ಗುಂಡು ಹಾರಿಸಿದ ಆರೋಪಿಯನ್ನೆ ಬಂಧಿಸಿ, ತನಿಖೆ ಪ್ರಮುಖ ಹಂತಕ್ಕೆ ಮುಟ್ಟಿಸಿದ್ದಾರೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಗಳಾದ ಎಲ್ಲ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.