ಮುಂದಿನ ಐದು ವರ್ಷ ನಮ್ಮದೆ ಸರಕಾರ: ಎಚ್.ಡಿ.ರೇವಣ್ಣ
ಹುಬ್ಬಳ್ಳಿ, ಜೂ.17: ರಾಜ್ಯದಲ್ಲಿ ಮುಂದಿನ ಐದು ವರ್ಷ ಸಮ್ಮಿಶ್ರ ಸರಕಾರವೆ ಆಡಳಿತ ನಡೆಸಲಿದ್ದು, ಜೆಡಿಎಸ್ ಕಾರ್ಯಕರ್ತರು ಅವರಿವರ ಮಾತುಗಳಿಗೆ ಧೃತಿಗೆಡಬಾರದೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಮಾತುಗಳಿಗೆ ಯಾರು ಕಿವಿಗೊಡುವ ಅಗತ್ಯವಿಲ್ಲ. ಯಾವುದೆ ಆತಂಕವಿಲ್ಲದೆ ಮುಂದಿನ ಐದು ವರ್ಷ ನಾವೆ ಅಧಿಕಾರ ನಡೆಸಲಿದ್ದೇವೆ. ಇದರಲ್ಲಿ ಯಾವುದೆ ಅನುಮಾನ ಬೇಡವೆಂದು ಸ್ಪಷ್ಟಪಡಿಸಿದರು.
ಸಮ್ಮಿಶ್ರ ಸರಕಾರದಲ್ಲಿ ಸೂಪರ್ ಸಿಎಂ ಎಂದು ನನಗೆ ಪುಕ್ಕಟೆ ಪ್ರಚಾರ ಸಿಗುತ್ತಿದೆ. ಆದರೆ, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಆರ್ಡಿಪಿಆರ್ ಇಲಾಖೆಗೆ ಅಧಿಕಾರಿಗಳ ಪಟ್ಟಿಯನ್ನು ನಾನು ಕೊಟ್ಟಿದೀನಿ. ಪೋಸ್ಟಿಂಗ್ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು, ಅಲ್ಲದೆ ನೀರಾವರಿ ಇಲಾಖೆಯಲ್ಲಿ ಹಸ್ತಕ್ಷೇ ಮಾಡಿಲ್ಲ ಎಂದು ಅವರು ತಿಳಿಸಿದರು.
ಹಸ್ತಕ್ಷೇಪ ಮಾಡಿದ್ದೇನೆಂದು ಕಾಂಗ್ರೆಸ್ ಅಧ್ಯಕ್ಷರು ಕೇಳಿದರೆ ಉತ್ತರ ಕೊಡುತ್ತೇನೆ ಎಂದ ಅವರು, ಡಿ.ಕೆ.ಶಿವಕುಮಾರ್ ಮತ್ತು ನಾನು ಚೆನ್ನಾಗಿದ್ದೀವಿ. ಸುಮ್ಮನೆ ನಮ್ಮ ನಡುವೆ ಜಗಳ ತಂದಿಡುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.