ಕೋಲ್ಕತ್ತಾದಲ್ಲಿ 12,000 ಕೋ. ರೂ. ಚಿನ್ನ ಆಮದಿನಲ್ಲಿ ವಂಚನೆ: ಬಹಿರಂಗ
ಕೋಲ್ಕತಾ, ಜೂ. 17: ಕೋಲ್ಕತ್ತಾ ಮೂಲದ ಚಿನ್ನದ ಉದ್ಯಮಿಯೋರ್ವ 25 ಬ್ಯಾಂಕ್ಗಳ ಒಕ್ಕೂಟಕ್ಕೆ 12,000 ಕೋ. ರೂ. ವಂಚಿಸಿದ್ದಾನೆ ಎಂದು ಕಂದಾಯ ಬೇಹುಗಾರಿಗೆ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ತಿಳಿಸಿದ್ದಾರೆ. 1700 ಕೆ.ಜಿ. ಆಮದಿತ ಸುಂಕ ಮುಕ್ತ ಚಿನ್ನದಲ್ಲಿ ಹಾಗೂ 25 ಬ್ಯಾಂಕ್ಗಳಿಗೆ ವಂಚಿಸಿದ ಆರೋಪದಲ್ಲಿ ಶ್ರೀ ಗಣೇಶ್ ಜ್ಯುವೆಲ್ಲರಿ ಹೌಸ್ನ ಪ್ರವರ್ತಕ ನೀಲೇಶ್ ಪರೇಖ್ ಅವರನ್ನು ಡಿಆರ್ಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಪರೇಖ್ ಅವರ ಬಂಧನವಾಗುತ್ತಿರುವುದು ಇದೇ ಮೊದಲಲ್ಲ. ಸಿಂಗಾಪುರ, ದುಬೈ ಹಾಗೂ ಹಾಂಗ್ಕಾಂಗ್ನಲ್ಲಿರುವ ನಕಲಿ ಕಂಪೆನಿಗಳ ಹೆಸರಲ್ಲಿ ಹವಾಲ ಜಾಲದ ಮೂಲಕ 2,672 ಕೋ. ರೂ. ಬ್ಯಾಂಕ್ ಸಾಲ ವಂಚಿಸಿದ ಆರೋಪದಲ್ಲಿ ಸಿಬಿಐ 2017 ಮೇಯಲ್ಲಿ ಸಿಬಿಐ ಪರೇಖ್ ಅವರನ್ನು ಬಂಧಿಸಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಒಕ್ಕೂಟದ ಸಾಲದಾತ ನೀಡಿದ ದೂರಿನಲ್ಲಿ ಪರೇಖ್ ಲೋನ್ ಪಡೆಯಲು ಅತ್ಯಧಿಕ ಲಾಭ ಇರುವ ನಕಲಿ ಕಂಪೆನಿಗಳ ದಾಖಲೆಗಳನ್ನು ಆಧಾರವಾಗಿ ವಿವಿಧ ಬ್ಯಾಂಕ್ಗಳಲ್ಲಿ ಇರಿಸಿದ್ದಾರೆ. ಅನಂತರ ಈ ಕಂಪೆನಿಗಳು ದೀವಾಳಿಯಾಗಿವೆ ಹಾಗೂ ಮುಚ್ಚಿವೆ ಎಂದು ಹೇಳಿದ್ದಾರೆ ಎಂದು ದೂರಿದೆ.