ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ; ಪತಿಯ ಬಂಧನ
ಮಡಿಕೇರಿ, ಜೂ.17: ವಿವಾಹಿತ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರಪೇಟೆ ಸಮೀಪದ ಹೊಸತೋಟ ಗ್ರಾಮದಲ್ಲಿ ನಡೆದಿದೆ.
ಕಾಗಡಿಕಟ್ಟೆ ಗ್ರಾಮದ ಯೂಸುಫ್ ಎಂಬವರ ಮಗಳು ರಂಶೀನಾ(22) ಆತ್ಮಹತ್ಯೆ ಮಾಡಿಕೊಂಡವರು. ಮೃತಳ ಪತಿ ಹೊಸತೋಟ ಗ್ರಾಮದ ರಶೀದ್(28)ನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಾಗಿದೆ.
2015ರಲ್ಲಿ ರಂಶೀನಾ ಅವರನ್ನು ರಶೀದ್ಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾಗಿ ಒಂದೇ ತಿಂಗಳಲ್ಲಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. 2016ರ ಮಾರ್ಚ್ನಲ್ಲಿ ಕಾಗಡಿಕಟ್ಟೆ ಹಾಗು ಹೋಸತೋಟ ಜಮಾಅತ್ನಲ್ಲಿ ಪ್ರಕರಣವನ್ನು ಸರಿಪಡಿಲಾಗಿತ್ತು. ನಂತರ ಪತಿಯ ಕಿರುಕುಳ ಜಾಸ್ತಿಯಾಗಿ, ಪ್ರಕರಣ ಪಟ್ಟಣದ ಠಾಣೆಯಲ್ಲಿ ತೀರ್ಮಾನವಾಗಿ, ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಆೋಪಿ ಮುಚ್ಚಳಿಕೆ ಬರೆದುಕೊಟ್ಟಿದ್ದ.
ಗಂಡನ ಮನೆಯಲ್ಲಿ ವಾಸವಿದ್ದ ರಂಶೀನಾಳಿಗೆ, ರಶೀದ್ ವರದಕ್ಷಿಣೆ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಮುಂದುವರಿಸಿದ ಪರಿಣಾಮ ಮನನೊಂದು ಶನಿವಾರ ಸಂಜೆ, ಕ್ರಿಮಿನಾಶಕ ಸೇವಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಂಶೀನಾ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ತಹಸೀಲ್ದಾರ್ ವೀರೇಂದ್ರ ಬಾಡಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತರು ಒಂದು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಮೃತ ಮಹಿಳೆ ಸಹೋದರ ಶರೀಪ್ ಸೋಮವಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಶೀದ್ ವಿರುದ್ಧ ದೂರು ದಾಖಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.