ವಿದ್ವತ್ ಮೇಲೆ ಹಲ್ಲೆ ಪ್ರಕರಣ: ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಐವರು ಆರೋಪಿಗಳು
ಬೆಂಗಳೂರು, ಜೂ.18: ವಿದ್ವತ್ ಮೇಲಿನ ಹಲ್ಲೆ ಕೇಸಿನಲ್ಲಿ ಜೈಲಿನಲ್ಲಿರುವ ಐವರು ಆರೋಪಿಗಳು ಈಗ ಸೆಷನ್ಸ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಮುಹಮ್ಮದ್ ನಲಪಾಡ್ ಹಾರಿಸ್ಗೆ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ತಮಗೂ ಜಾಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿ ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ.
ಈ ಐವರು ಆರೋಪಿಗಳಿಗೆ ಈ ಹಿಂದೆ ಸೆಷನ್ಸ್ ಕೋರ್ಟ್ ಮತ್ತು ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುಹಮ್ಮದ್ ನಲಪಾಡ್ ಹಾರಿಸ್ಗೆ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ.
ಮಂಜುನಾಥ್, ಮಹಮದ್ ಅಶ್ರಫ್, ಮಹಮದ್ ನಾಸಿರ್, ಅರುಣ್ ಬಾಬು ಮತ್ತು ಬಾಲಕೃಷ್ಣ ಎಂಬ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಅಭಿಷೇಕ್ ಎಂಬ ಆರೋಪಿಗೆ ಸೆಷನ್ಸ್ ಕೋರ್ಟ್ ಜಾಮೀನು ನೀಡಿತ್ತು. ಕೃಷ್ಣ ಎಂಬ ಆರೋಪಿ ಈ ಕೇಸಿನಲ್ಲಿ ಇದುವರೆಗೂ ನಾಪತ್ತೆಯಾಗಿದ್ದಾನೆ.
ಫರ್ಜಿ ಕಫೆಯಲ್ಲಿ ಮುಹಮ್ಮದ್ ನಲಪಾಡ್ ಹಾರಿಸ್ ಜತೆಗಿದ್ದ ಆತನ ಸ್ನೇಹಿತರೂ ಕೂಡ ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಸದ್ಯ ಐವರೂ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿಗಳ ಜಾಮೀನು ಅರ್ಜಿ ಸ್ವೀಕರಿಸಿರುವ ಕೋರ್ಟ್ ವಿಚಾರಣೆಗೆ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.