ರಂಗಭೂಮಿ ಅಭಿರುಚಿ ನಿರಂತರವಾಗಿರಲಿ: ನಾಗೇಂದ್ರ ಶಾ
ಮುದ್ರಾಡಿ: ರಾಷ್ಟ್ರೀಯ ರಂಗೋತ್ಸವಕ್ಕೆ ಚಾಲನೆ
ಮುದ್ರಾಡಿ, ಜೂ.18: ರಂಗಭೂಮಿ ಜೀವನವನ್ನು ಸುಂದರ ಗೊಳಿಸುವ ರಂಗಸ್ಥಳ. ಅದು ಮನಸ್ಸಿನ ತುಡಿತ ಕೂಡ ಆಗಿದೆ. ಗ್ರಾಮೀಣ ಪ್ರದೇಶದ ಕುಟುಂಬವೊಂದು ರಂಗಸೇವೆಯಲ್ಲಿ ತೊಡಗಿರುವುದು ಬಹುದೊಡ್ಡ ಸಾಧನೆ. ಇವರ ರಂಗಭೂಮಿ ಅಭಿರುಚಿ ನಿರಂತರವಾಗಿರಲಿ ಎಂದು ಖ್ಯಾತ ರಂಗ ನಿರ್ದೇಶಕ ವಿ.ನಾಗೇಂದ್ರ ಶಾ ಹೇಳಿದ್ದಾರೆ.
ಮುದ್ರಾಡಿ ನಾಟ್ಕದೂರಿನ ಚೌಟರ ಬಯಲಿನಲ್ಲಿ ಜೂ.15ರಿಂದ 22ರವರೆಗೆ ನಮತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ವತಿಯಿಂದ ನಡೆಯುವ ಮುದ್ರಾಡಿ ರಾಷ್ಟ್ರೀಯ ರಂಗೋತ್ಸವ- 8ಕ್ಕೆ ಚಾಲನೆ ನೀಡಿ ಅವರು ಮಾತನಾಡು ತಿದ್ದರು.
ಮುದ್ರಾಡಿ ರಾಷ್ಟ್ರೀಯ ರಂಗೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ರಂಗಭೂಮಿ ಮನುಷ್ಯನ ವ್ಯಕ್ತಿತ್ವವನ್ನು ಅರಳಿಸುವ ಮೂಲಕ ಮನರಂಜನೆ ಜೊತೆಗೆ ಬದುಕಿನ ಪಾಠವೂ ಆಗಿದೆ ಎಂದರು.
ನಾಟ್ಕ ಮುದ್ರಾಡಿ ಸಂಸ್ಥಾಪಕ, ಮುದ್ರಾಡಿ ಆದಿಶಕ್ತಿ ಮತ್ತು ನಂದೀಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ ಸ್ವಾಮೀಜಿ ಆರ್ಶೀವ ಚನ ನೀಡಿದರು. ರಂಗನಟ ತುಳುವ ಮಾಣಿಕ್ಯ ಅರವಿಂದ ಬೋಳಾರ್ ಅವರಿಗೆ ರಂಗಾಭಿನಂದನೆ ನಡೆಯಿತು.
ಮುಂಬೈಯ ರಂಗ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ, ಬದಿಯಡ್ಕ ರಾಜೇಶ್ ಆಳ್ವ ಮಾತನಾಡಿದರು. ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕ ದೇವದಾಸ ಪೈ, ಹಿರಿಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ನಟ, ರಂಗ ನಿರ್ದೇಶಕ ಸುಕುಮಾರ್ ಮೋಹನ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಜಗದೀಶ್ ಜಾಲ ಕಾರ್ಯಕ್ರಮ ನಿರೂಪಿಸಿದರು. ಮೊದಲ ದಿನ ಮಂಜುನಾಥ ಎಲ್ ಬಡಿಗೇರ್ ನಿರ್ದೇಶನದ ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯಿಂದ ಹಳೆಗನ್ನಡ ನಾಟಕ ‘ದಶಾನನ ಸ್ವಪ್ನಸಿದ್ಧಿ’ ನಾಟಕ ಪ್ರದರ್ಶನಗೊಂಡಿತು.