ತನ್ನ ಅನಾರೋಗ್ಯದ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ಇರ್ಫಾನ್ ಖಾನ್
ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ
ಮುಂಬೈ, ಜೂ.9: ಕೆಲ ತಿಂಗಳ ಹಿಂದೆ ನ್ಯೂರೋಎಂಡೋಕ್ರೈನ್ ಟ್ಯೂಮರ್ ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ "ಜೀವನದ ಊಹಿಸಲಸಾಧ್ಯವಾದ ಸ್ವರೂಪದ ಬಗ್ಗೆ ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡುವಾಗ ನನಗೆ ಅನುಭವವಾಯಿತು" ಎಂದಿದ್ದಾರೆ.
"ನಾನು ಬೇರೆಯೇ ಆಟದಲ್ಲಿದ್ದೆ. ವೇಗದ ರೈಲಿನಲ್ಲಿ ಸಂಚರಿಸುತ್ತಿದ್ದೆ, ಕನಸುಗಳು, ಯೋಜನೆಗಳು, ಗುರಿಗಳಿದ್ದವು, ಅವುಗಳಲ್ಲಿಯೇ ಮಗ್ನನಾಗಿದ್ದೆ. ಆಗ ಥಟ್ಟನೇ ಯಾರೋ ನನ್ನ ಭುಜ ತಟ್ಟಿದಾಗ ನಾನು ತಿರುಗಿ ನೋಡಿದಾಗ ಅಲ್ಲಿ ಟಿಸಿ, 'ನೀವು ತಲುಪಬೇಕಾದ ಸ್ಥಳ ಬರಲಿದೆ. ಕೆಳಗಿಳಿಯಿರಿ' ಅನ್ನುತ್ತಾನೆ. ನನಗೆ ಗೊಂದಲ. `ಇಲ್ಲ ಇಲ್ಲ ನನ್ನ ತಲುಪಬೇಕಾದ ಸ್ಥಳ ಬಂದಿಲ್ಲ' ಎನ್ನುತ್ತೇನೆ. `ಆದರೆ ಇದುವೇ ಅದು, ಕೆಲವೊಮ್ಮೆ ಹಾಗೆಯೇ ಆಗುತ್ತದೆ' ಎಂದು ಆತ ಹೇಳುತ್ತಾನೆ. ಸಾಗರದಲ್ಲಿ ತೇಲುತ್ತಿರುವ ಮರದ ತೊಗಟೆಯಂತಿರುವ ನಿಮಗೆ ಅಲ್ಲಿನ ಅಲೆಗಳು ಹೇಗಿರಬಹುದೆಂದು ಊಹಿಸಲು ಅಸಾಧ್ಯವಾಗುತ್ತದೆ ಹಾಗೂ ಅವುಗಳನ್ನು ನಿಯಂತ್ರಿಸಲು ನೀವು ಹತಾಶರಾಗಿ ಪ್ರಯತ್ನಿಸುತ್ತೀರಿ. ಇಂತಹ ಒಂದು ಹೆದರಿಕೆ ಹುಟ್ಟಿಸುವ ಸನ್ನಿವೇಶದಲ್ಲಿ ಆಸ್ಪತ್ರೆಯಲ್ಲಿದ್ದಾಗ ನಾನು ನನ್ನ ಪುತ್ರನ ಬಳಿ 'ಈಗಿನ ರೀತಿಯಲ್ಲಿ ಈ ಕಷ್ಟವನ್ನು ಎದುರಿಸದಂತೆ ಮಾಡುವುದನ್ನೇ ನಾನು ನನ್ನಿಂದ ನಿರೀಕ್ಷಿಸುತ್ತಿದ್ದೇನೆ. ನಾನು ನನ್ನ ಕಾಲುಗಳ ಮೇಲೆ ನಿಲ್ಲಬೇಕಿದೆ. ಭೀತಿ ಮತ್ತು ಭಯ ನನ್ನನ್ನು ಆಕ್ರಮಿಸಬಾರದು' ಎನ್ನುತ್ತೇನೆ. ಇಷ್ಟರವರೆಗೆ ನೀವು ನೋವಿನ ಬಗ್ಗೆ ತಿಳಿದಿದ್ದರೆ ಈಗ ಅದರ ಸ್ವರೂಪ ಹಾಗೂ ತೀವ್ರತೆಯ ಅನುಭವ ನಿಮಗಾಗುತ್ತದೆ. ಯಾವುದೇ ಸಮಾಧಾನ, ಪ್ರೇರಣೆಯು ಕೆಲಸ ಮಾಡುತ್ತಿಲ್ಲ. ಇಡೀ ಜಗತ್ತೇ ನೋವು ಹಾಗೂ ಈ ನೋವು ದೇವರಿಗಿಂತಲೂ ದೊಡ್ಡದಾಗಿದೆ ಎಂದು ಅನಿಸಿದೆ' ಎಂದು ಇರ್ಫಾನ್ ಹೇಳಿದ್ದಾರೆ.
"ಫಲಿತಾಂಶ ಏನಾಗಬಹುದೆಂದು ಯೋಚಿಸದೆ, ಇದು ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಬಹುದೆಂದೂ ಯೋಚಿಸಿದೆ. ಈಗಿನಿಂದ ನಾಲ್ಕು, ಎಂಟು ತಿಂಗಳು ಅಥವಾ ಎರಡು ವರ್ಷ. ಮೊದಲ ಬಾರಿಗೆ ಸ್ವಾತಂತ್ರ್ಯ ಏನೆಂದು ನನಗೆ ತಿಳಿಯಿತು. ಅದೊಂದು ಸಾಧನೆಯಂತೆ. ನಾನು ಜೀವನವನ್ನು ಮೊದಲ ಬಾರಿ ಅನುಭವಿಸುವಂತೆ ಆಗಿತ್ತು. ನನ್ನ ಪ್ರತಿಯೊಂದು ಕಣಕಣದಲ್ಲೂ ನಂಬಿಕೆಯಿದೆ. ಅದು ಉಳಿಯುವುದೋ ಎಂಬುದನ್ನು ಸಮಯವೇ ಹೇಳಲಿದೆ'' ಎಂದು ಇರ್ಫಾನ್ ಹೇಳಿದ್ದಾರೆ.