ಬಜೆಟ್ ಮಂಡನೆ ಬಗ್ಗೆ ಯಾವುದೇ ಗೊಂದಲವಿಲ್ಲ: ಸಚಿವ ರೇವಣ್ಣ
ಮಂಗಳೂರು, ಜೂ.19: ಬಜೆಟ್ ಮಂಡನೆ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡುವೆ ಯಾವುದೇ ಗೊಂದಲ ಇಲ್ಲ. ಕುಮಾರಸ್ವಾಮಿ ಉತ್ತಮ ಬಜೆಟ್ ನೀಡಲಿದ್ದಾರೆ ಎಂದು ಲೋಕೋಪಯೋಗಿ ಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ನಗರದ ಸರ್ಕ್ಯೂಟ್ಹೌಸ್ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಚಾರ್ಮಾಡಿ ಘಾಟಿಯಲ್ಲಿ ಬರುವ ಸಂದರ್ಭ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆರೋಗ್ಯ ವಿಚಾರಿಸಿ ಬಂದಿದ್ದೇನೆಯೇ ಹೊರತು ಬೇರೆ ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಿಲ್ಲ. ನಿನ್ನೆ ಹೊಸದಿಲ್ಲಿಗೆ ಹೋದಾಗ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದೆ. ಇದಕ್ಕೆ ಯಾವುದೇ ಬಣ್ಣ ಕಟ್ಟುವ ಅಗತ್ಯವಿಲ್ಲ ಎಂದರು.
ಸರಕಾರದ ಕುರಿತಂತೆ ಸಿದ್ಧರಾಮಯ್ಯನವರಿಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಅಂತಹ ಮಾತುಗಳು ಸುಳ್ಳು. ಸರಕಾರ ಚೆನ್ನಾಗಿ ನಡೆಯಬೇಕು. ಬಡವರ ಕೆಲಸ ಆಗಬೇಕು ಎಂದವರು ಹೇಳಿ್ದಾರೆ ಎಂದು ರೇವಣ್ಣ ನುಡಿದರು.
ಮಳೆಯಿಂದಾಗಿ ದಕ್ಷಿಣ ಕನ್ನಡದಲ್ಲಿ ಕಂಡರಿಯದ ಹಾನಿ ಸಂಭವಿಸಿರುವುದಾಗಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯ ಮೇರೆಗೆ ಇಲ್ಲಿಗೆ ಅದಕ್ಕಾಗಿ ಬಂದಿದ್ದು, ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ.ನಮ್ಮ ಇಲಾಖೆಯ ಸಂಬಂಧಿಸಿದ ರಸ್ತೆಗಳಿಗೆ ಆಗಿರುವ ಹಾನಿಗೆ ಸೂಕ್ತ ಕ್ರಮಕ್ಕೆ ತಿಳಿಸಿದ್ದೇನೆ. ಪಾಲಿಕೆಗೆ ಸಂಬಂಧಿಸಿದ ರಸ್ತೆಗಳನ್ನು ಪಾಲಿಕೆ ಗಮನ ಹರಿಸಬೇಕು. ಪಾಲಿಕೆಯಲ್ಲಿ ಹಣವಿಲ್ಲದಿದ್ದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಆದಷ್ಟು ನೆರವನ್ನು ಒದಗಿಸಲಾಗುವುದು ಎಂದು ಸಚಿವ ರೇವಣ್ಣ ಹೇಳಿದರು.