ದ.ಕ. ಜಿಪಂ ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷರಾಗಿ ಯು.ಪಿ. ಇಬ್ರಾಹೀಂ ಅವಿರೋಧ ಆಯ್ಕೆ
ಮಂಗಳೂರು, ಜೂ.19: ದ.ಕ.ಜಿಪಂ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ನ ಯು.ಪಿ.ಇಬ್ರಾಹೀಂ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಅನಿತಾ ಹೇಮನಾಥ ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಬಿಜೆಪಿಯ ಜನಾರ್ದನ ಗೌಡ ಆಯ್ಕೆಯಾಗಿದ್ದಾರೆ.
ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನಿಯಮಾವಳಿಯಂತೆ ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಆಯ್ಕೆಯಾಗಿದ್ದಾರೆ.
ಜಿಪಂ 2ನೆ ಅವಧಿಯ ಸ್ಥಾಯಿ ಸಮಿತಿಗೆ ಈ ಹಿಂದೆಯೇ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಸ್ಥಾಯಿ ಸಮಿತಿ ಚುನಾವಣೆ ಸಂದರ್ಭ ಬಿಜೆಪಿ ಮತ್ತು ಕಾಂಗ್ರೆಸ್ ಅವಿರೋಧ ಆಯ್ಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 3 ಸ್ಥಾಯಿ ಸಮಿತಿ ಬಿಜೆಪಿಗೆ ಮತ್ತು 2 ಸ್ಥಾಯಿ ಸಮಿತಿ ಕಾಂಗ್ರೆಸ್ಗೆ ಲಭಿಸಿತ್ತು. ಅದಲ್ಲದೆ, 2 ಸ್ಥಾಯಿ ಸಮಿತಿಗೆ ತಲಾ 4 ಕಾಂಗ್ರೆಸ್ ಮತ್ತು ತಲಾ 3 ಬಿಜೆಪಿ ಹಾಗೂ 3 ಸ್ಥಾಯಿ ಸಮಿತಿಗೆ ತಲಾ 3 ಕಾಂಗ್ರೆಸ್ ಮತ್ತು ತಲಾ 4 ಬಿಜೆಪಿ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು.
ಬಳಿಕ ವಿಧಾನ ಸಭಾ ಚುನಾವಣೆ ಬಂದ ಕಾರಣ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಾಕಿಯಾಗಿತ್ತು. ಇದೀಗ ಅಧ್ಯಕ್ಷರುಗಳ ಆವಿರೋಧ ಆಯ್ಕೆಯೊಂದಿಗೆ ಎಲ್ಲಾ ಪ್ರಕ್ರಿಯೆ ಮುಗಿದಿದೆ.