ಹನೂರು: ಸರ್ಕಾರಿ ಪ್ರೌಢ ಶಾಲೆಗೆ ಸೂಕ್ತ ತಡೆಗೋಡೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ
ಹನೂರು,ಜೂ.19: ಕ್ಷೇತ್ರ ವ್ಯಾಪ್ತಿಯ ಗಡಿಯಂಚಿನ ಭಾಗದಲ್ಲಿರುವ ಮಿಣ್ಯಂ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಸುತ್ತುಗೋಡೆ ಇದ್ದರೂ ಸಹ ಅದಕ್ಕೆ ಗೇಟ್ ಇಲ್ಲದೆ ಶಾಲೆಯ ಒಳಗಡೆ ಕಾಡು ಪ್ರಾಣಿಗಳು ನುಗ್ಗುತ್ತಿದ್ದು, ಶಾಲೆ ಮತ್ತು ಮಕ್ಕಳ ಸುರಕ್ಷತೆಗಾಗಿ ಮರದ ಸೊಪ್ಪುಗಳಿಂದಲೇ ಬೇಲಿ ಹಾಕಿ ಸುತ್ತು ಗೋಡೆಯಂತೆ ನಿರ್ಮಿಸಿ ಪಾಠ ಪ್ರವಚನಗಳನ್ನು ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ. ಇಲ್ಲಿನ ನೈಜ ಪರಿಸ್ಥಿತಿಯನ್ನು ಜನಪ್ರತಿನಿಧಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಹ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕ್ಷೇತ್ರದ ಕಾಡಂಚಿನ ಗಡಿಭಾಗ ಮಿಣ್ಯಂ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಗ್ರಾಮದ ಮಲ್ಲಿಕಾರ್ಜುನಶೆಟ್ಟಿ ಎಂಬುವವರು ಒಂದು ಏಕರೆ ಭೂಮಿಯನ್ನು ದಾನ ನೀಡಿದ್ದು, ಶಾಲೆಯಲ್ಲಿ ಎಂಟು ಕೊಠಡಿ, ಒಂದು ಅಕ್ಷರ ದಾಸೋಹ ಕೊಠಡಿ ಹಾಗೂ ಎರಡು ಶೌಚಾಲಯ ಇದೆ. 10ನೇ ತರಗತಿವರೆಗೂ ಇದ್ದು ಪ್ರಸುತ್ತ ಶೈಕ್ಷಣಿಕ ವರ್ಷದಲ್ಲಿ 125 ಮಕ್ಕಳು ದಾಖಲಾಗಿದ್ದಾರೆ. ಮುಖ್ಯಶಿಕ್ಷಕ ಸೇರಿದಂತೆ ನಾಲ್ಕು ಮಂದಿ ಖಾಯಂ ಟೀಚರ್ ಗಳಿದ್ದು, ಇಬ್ಬರು ಅಥಿತಿ ಶಿಕ್ಷಕರು ಸಹ ಇದ್ದಾರೆ. ವಿಶಾಲವಾದ ಆಟದ ಮೈದಾನ ಹಾಗೂ ಶೈಕ್ಷಣಿಕವಾಗಿ ಶಾಲೆ ಉತ್ತಮವಾಗಿದೆ. ಆದರೆ ಈ ಶಾಲೆಯ ಕಾಂಪೌಡ್ಗೆ ಗೇಟ್ ಇಲ್ಲದೆ ಕಾಡಿನ ಪ್ರಾಣಿಗಳಿಂದ ಮಕ್ಕಳು ಮತ್ತು ಶಾಲೆಯನ್ನು ರಕ್ಷಿಸಿಲು ಶಿಕ್ಷಕರು ಕಾಡಿನ ಮರ ಗಿಡದ ಸೊಪ್ಪುಗಳನ್ನು ತಂದು ಕೃತಕ ಗೇಟ್ ಆಳವಡಿಸಿಕೊಂಡಿದ್ದು ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಡಂಚಿನ ಗ್ರಾಮದ ಶಾಲೆಯತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.