ಅಪಘಾತ ಪ್ರಕರಣ: ಆರೋಪಿ ಚಾಲಕನಿಗೆ ಶಿಕ್ಷೆ
ಉಡುಪಿ, ಜೂ.19: ಅಪಘಾತ ನಡೆಸಿದ ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೆ ಹಾಗೂ ಪೊಲೀಸರಿಗೆ ಮಾಹಿತಿ ನೀಡದೆ ಪರಾರಿಯಾದ ಆರೋಪಿ ವಾಹನ ಚಾಲಕನಿಗೆ ಶಿಕ್ಷೆ ವಿಧಿಸಿ ಉಡುಪಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೂ.14ರಂದು ಆದೇಶ ನೀಡಿದೆ.
ಕಾರ್ಗೊ ಕಿಂಗ್ ವಾಹನದ ಚಾಲಕ ಪ್ರಶಾಂತ್ ಪೈ ಶಿಕ್ಷೆಗೆ ಗುರಿಯಾದ ಆರೋಪಿ. 2014ರ ಆ.20ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಪ್ರಶಾಂತ್ ಪೈ ಕಾರ್ಗೊ ಕಿಂಗ್ ವಾಹನವನ್ನು ಹಿರಿಯಡ್ಕ-ಕಾರ್ಕಳ ರಸ್ತೆಯಲ್ಲಿ ಚಲಾಯಿಸಿ ಕೊಂಡು ಬಂದು ಮುತ್ತೂರು ಕ್ರಾಸ್ ಎಂಬಲ್ಲಿ ಬೈಕಿಗೆ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್ ಸವಾರರಾದ ರಾಜು ಕೆ.ಎಸ್. ಹಾಗೂ ಟಿ.ಕೆ.ಮಧುಸೂದನ್ ಎಂಬವರು ತೀವ್ರ ಸ್ವರೂಪದ ಗಾಯಗೊಂಡರು.
ಆದರೆ ಚಾಲಕ ಪ್ರಶಾಂತ್ ಪೈ ಗಾಯಾಳುಗಳನ್ನು ಆಸ್ವತ್ರೆಗೆ ದಾಖಲಿಸದೆ ಪೋಲಿಸರಿಗೆ ಮಾಹಿತಿಯನ್ನು ನೀಡದೇ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದರು. ಈ ಬಗ್ಗೆ ಹಿರಿಯಡ್ಕ ಠಾಣೆಯ ಪ್ರಕರಣ ದಾಖಲಿಸಿಕೊಂಡ ಆಗಿನ ಉಪನಿರೀಕ್ಷಕ ರಫೀಕ್ ಎಂ. ತನಿಖೆ ನಡೆಸಿ ದೋಷಾರೋಪಣೆ ಪತ್ರ ವನ್ನು ಸಲ್ಲಿಸಿದ್ದರು.
ಆರೋಪಿ ವಿರುದ್ಧದ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಧೀಶ ಇರ್ಫಾನ್ ಆರೋಪಿ ಚಾಲಕನಿಗೆ 2500ರೂ. ದಂಡ ವಿಧಿಸಿದ್ಧು ದಂಡ ಪಾವತಿಸಲು ತಪ್ಪಿದ್ದಲ್ಲಿ 6 ತಿಂಗಳ ಸಜೆ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.