ಕುಂದಾಪುರ: ಪ್ರತಾಪ್ಚಂದ್ರ ಶೆಟ್ಟಿ ಸಚಿವ ಸ್ಥಾನ ನೀಡುವಂತೆ ಆಗ್ರಹ
ಕುಂದಾಪುರ, ಜೂ.19: ರಾಜ್ಯ ಸರಕಾರದ ಸಚಿವ ಸಂಪುಟದಲ್ಲಿ ಉಡುಪಿ ಜಿಲ್ಲೆಗೆ ಯಾವುದೇ ಸ್ಥಾನಮಾನ ಇಲ್ಲದಿರುವುದರಿಂದ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಆಗ್ರಹಿಸಿದೆ.
ಕುಂದಾಪುರದಿಂದ ನಿರಂತರವಾಗಿ ನಾಲ್ಕು ಬಾರಿ ಶಾಸಕರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಾಪ್ ಚಂದ್ರ ಶೆಟ್ಟಿ ಸದನದ ಹಿರಿಯ ನಾಯಕರಾಗಿ ಆಡಳಿತದ ಬಗ್ಗೆ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಹಣದ ಥೈಲಿ, ಪ್ರಭಾವಗಳಿಂದ ಅಧಿಕಾರ ಪಡೆಯುವ ಈ ಕಾಲದಲ್ಲಿ ತೀರಾ ವಿಭಿನ್ನರಾಗಿರುವ ಪ್ರತಾಪ್ ಚಂದ್ರ ಶೆಟ್ಟಿಗೆ ಸಚಿವ ಸ್ಥಾನ ದೊರೆತರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಘಟಕದ ಅಧ್ಯಕ್ಷ ಬಿ.ಹಾರೂನ್ ಸಾಹೇಬ್, ಪದಾಧಿಕಾರಿಗಳಾದ ಸಲಾಂ ತೆಕ್ಕಟ್ಟೆ, ಶಾಲೆಟ್ ರೆಬೆಲ್ಲೋ, ಆಶಾ ಕರ್ವಾಲ್ಲೊ, ವಿನೋದ್ ಕ್ರಾಸ್ತಾ, ಮಾಜಿ ಪುರಸಭಾ ಸದಸ್ಯ ವಿನಯ ಪಾಸ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.