ಮಾಲೆಗಾಂವ್ ಸ್ಫೋಟ: ಖುಲಾಸೆ ನಿರಾಕರಣೆ ವಿರುದ್ಧ ಮೇಲ್ಮನವಿ ಸಲ್ಲಿಸಲಿರುವ ಪುರೋಹಿತ್
ಮುಂಬೈ,ಜೂ.19: 2008ರ ಮಾಲೆಗಾಂವ್ ಸ್ಫೋಟ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ತನ್ನ ಖುಲಾಸೆ ಮನವಿಯನ್ನು ನಿರಾಕರಿಸಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಸಲು ಅನುಮತಿ ನೀಡುವಂತೆ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
2018ರ ಡಿಸೆಂಬರ್ 18ರಂದು ಪುರೋಹಿತ್ ನನ್ನು ವಿಚಾರಣೆ ನಡೆಸುವ ಸರಕಾರದ ಆದೇಶವನ್ನು ತಳ್ಳಿಹಾಕಲು ಉಚ್ಚ ನ್ಯಾಯಾಲಯವು ನಿರಾಕರಿಸಿತ್ತು. ಪುರೋಹಿತ್ ಸೇನಾಧಿಕಾರಿಯಾಗಿದ್ದ ಕಾರಣ ಅವರ ವಿರುದ್ಧ ತನಿಖೆ ನಡೆಸಲು ಸರಕಾರದ ಅನುಮತಿಯ ಅಗತ್ಯವಿತ್ತು. ಉಚ್ಚ ನ್ಯಾಯಾಲಯವು ಪುರೋಹಿತ್ನನ್ನು ಖುಲಾಸೆಗೊಳಿಸಲು ನಿರಾಕರಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯ ಡಿಸೆಂಬರ್ 27ರಂದು ಪ್ರಕರಣದಿಂದ ಕೈಬಿಡಲು ಪುರೋಹಿತ್ ಸಲ್ಲಿಸಿದ್ದ ಮನವಿಯನ್ನು ತಳ್ಳಿಹಾಕಿತ್ತು. ಇದೇ ವೇಳೆ ನ್ಯಾಯಾಲಯವು ಪುರೋಹಿತ್, ಸಾಧ್ವಿ ಪ್ರಗ್ಯಾ ಸಿಂಗ್ ಹಾಗೂ ಇತರ ಆರು ಆರೋಪಿಗಳೋ ಮೇಲಿದ್ದ ಮಹರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ (ಮಕೋಕಾ) ದಾಖಲಾಗಿದ್ದ ದೂರುಗಳನ್ನು ಕೈಬಿಟ್ಟಿತ್ತು.
ತನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ (ಯುಎಪಿಎ) ಯಡಿ ಪ್ರಕರಣ ದಾಖಲಿಸಿರುವುದು ಅಸಿಂಧುವಾಗಿದ್ದು ವಿಚಾರಣಾ ನ್ಯಾಯಾಲಯವು ತನ್ನ ವಿರುದ್ಧದ ಆರೋಪಗಳನ್ನು ಪರಿಗಣಿಸಬಾರದಿತ್ತು ಎಂದು ತಿಳಿಸಿದ್ದರು.