ತೂತುಕುಡಿ ಗೋಲಿಬಾರ್ ಪ್ರಕರಣ ಸಿಬಿಐ ತನಿಖೆಗೆ ಸೂಕ್ತ: ಮದ್ರಾಸ್ ಉಚ್ಚ ನ್ಯಾಯಾಲಯ
ಚೆನ್ನೈ, ಜೂ. 19: ಇತ್ತೀಚೆಗೆ ತೂತುಕುಡಿಯಲ್ಲಿ ಸ್ಟರ್ಲೈಟ್ ಕಂಪೆನಿಯ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರು ನಡೆಸಿದ ಗೋಲಿಬಾರ್ ಪ್ರಕರಣ ಸಿಬಿಐ ತನಿಖೆಗೆ ಸೂಕ್ತ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಸೋಮವಾರ ಹೇಳಿದೆ.
ಪೊಲೀಸರು ಭಾಗಿಯಾಗಿರುವುದರಿಂದ ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತ ಎಂದು ಪ್ರಥಮ ಪೀಠದ ಮುಂದೆ ಬಂದ ವಕೀಲರೊಬ್ಬರ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಹೇಳಿದ್ದಾರೆ.
ಸ್ಟರ್ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆ ಸಂದರ್ಭ 13 ಜನರ ಸಾವಿಗೆ ಕಾರಣವಾಗಿದ್ದ ಮೇ 22 ಹಾಗೂ 23ರ ಗೋಲಿಬಾರ್ ಕುರಿತು ತನಿಖೆ ನಡೆಸುವಂತೆ ಕೋರಿ ದೂರುದಾರ ಹಾಗೂ ವಕೀಲ ಎಸ್. ರಜನಿಕಾಂತ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಯುದ್ಧದಲ್ಲಿ ಶುತ್ರಗಳ ಮೇಲೆ ಪ್ರಯೋಗಿಸುವ ಅತ್ಯಾಧುನಿಕ ಗನ್ನಿಂದ ಪೊಲೀಸರು ಗೋಲಿಬಾರ್ ನಡೆಸಿದರು. ಪೊಲೀಸರು ವ್ಯಾನ್ ಹಾಗೂ ಅಷ್ಟೇ ಎತ್ತರದ ಸ್ಥಳದಲ್ಲಿ ನಿಂತು ವ್ಯಕ್ತಿಯ ಮೇಲ್ಭಾಗಕ್ಕೆ ಗುಂಡು ಹಾರಿಸಿದರು ಎಂದು ಅವರು ಮನವಿಯಲ್ಲಿ ಹೇಳಿದ್ದಾರೆ.