ನಾಗಮಂಗಲ: ಹಳೆ ದ್ವೇಷದ ಹಿನ್ನಲೆ; ಸಂಬಂಧಿಯ ಮೇಲೆ ಮಾರಣಾಂತಿಕ ಹಲ್ಲೆ
ನಾಗಮಂಗಲ,ಜೂ.19: ಮನೆ ನಿವೇಶನ ವಿಚಾರದಲ್ಲಿನ ಕಲಹದ ಹಳೆ ದ್ವೇಷದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಶಿವಕುಮಾರ್ ಎಂಬವರೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯಾಗಿದ್ದಾರೆ. ಸದರಿ ಗ್ರಾಮದ ಮನು, ಚೇತನ್ ರಾಮೇಗೌಡ ಹಲ್ಲೆ ಮಾಡಿದರೆಂದು ಆರೋಪಿಸಲಾಗಿದೆ.
ಶಿವಕುಮಾರ್ ಮತ್ತು ಮನು ಕುಟುಂಬಗಳ ನಡುವೆ ಗ್ರಾಮದ ನಿವೇಶನವೊಂದರ ವಿಚಾರವಾಗಿ ಹಲವು ವರ್ಷಗಲಿಂದಲೂ ದಾಯಾದಿ ಕಲಹವಿದ್ದು ಕೋರ್ಟ್ನಲ್ಲಿ ದಾವೆ ಕೂಡ ಇತ್ತು ಎನ್ನಲಾಗಿದೆ. ಈ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಜಮೀನು ಹತ್ತಿರದಿಂದ ಎತ್ತಿನ ಗಾಡಿಯಲ್ಲಿ ಮನೆಗೆ ವಾಪಸ್ ಬರುತ್ತಿದ್ದ ಶಿವಕುಮಾರ್ ಮೇಲೆ ಮನು ಮತ್ತು ಸಂಗಡಿಗರು ಏಕಾಏಕಿ ದಾಳಿ ನಡೆಸಿ ತೀವ್ರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಚೀರಾಟ ಕೇಳಿ ಸಾರ್ವಜನಿಕರು ತಕ್ಷಣವೇ ಶಿವಕುಮಾರ್ ರನ್ನು ಬಿಜಿನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆ ಮಾಡಿರುವ ಮನು ಬೆಂಗಳೂರಿನ ಠಾಣೆಯೊಂದರಲ್ಲಿ ಪೋಲಿಸ್ ಪೇದೆಯಾಗಿದ್ದಾರೆ ಎನ್ನಲಾಗಿದ್ದು, ಕೇಸ್ನಿಂದ ಬಚಾವ್ ಮಾಡುವ ಪ್ರಯತ್ನ ನಡೆದಿದೆ ಎಂದು ಶಿವಕುಮಾರ್ ಪತ್ನಿ ಕವಿತ ಆರೋಪಿಸಿದ್ದಾರೆ.
ಈ ಸಂಬಂಧ ಬೆಳ್ಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.