'ಹಣ ಹಂಚಿ ಗೆಲುವು ಸಾಧಿಸಬಹುದು ಎನ್ನುವವರಿಗೆ ಸೋಲಾಗಿದೆ'
ಬಿನ್ನಿಪೇಟೆ ನೂತನ ಜೆಡಿಎಸ್ ಸದಸ್ಯೆ ಐಶ್ವರ್ಯಾ ನಾಗರಾಜ್
ಬೆಂಗಳೂರು, ಜೂ.20: ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರಿಗೆ ಹಣ ಹಂಚಿ ಗೆಲುವು ಸಾಧಿಸಬಹುದು ಎನ್ನುವವರಿಗೆ ಸೋಲಾಗಿದೆ ಎಂದು ಬಿನ್ನಿಪೇಟೆ ನೂತನ ಜೆಡಿಎಸ್ ಸದಸ್ಯೆ ಐಶ್ವರ್ಯಾ ನಾಗರಾಜ್ ಇಂದಿಲ್ಲಿ ಹೇಳಿದರು.
ಬುಧವಾರ ಬಿನ್ನಿಪೇಟೆ ಉಪಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಅವರು, ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ. ಹಣಕ್ಕೆ ಅಲ್ಲ ಎಂಬ ಸಂದೇಶ ಮತದಾರರು ತೀರ್ಮಾನಿಸಿದ್ದಾರೆ. ಬಿನ್ನಿಪೇಟೆ ಎಂದರೆ, ಕಾಂಗ್ರೆಸ್, ದಿನೇಶ್ ಗುಂಡೂರಾವ್ ಅಲ್ಲ, ಬದಲಾಗಿ ಬಿಟಿಎಸ್ ನಾಗರಾಜ್ ಎಂದು ವಾಗ್ದಾಳಿ ನಡೆಸಿದರು.
ಬಿನ್ನಿಪೇಟೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳುತ್ತಿದ್ದರು. ಆದರೆ, ಇಂದು ಬಿನ್ನಿಪೇಟೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು, ಇದಕ್ಕೆ ಮೂಲ ಕಾರಣ ತಂದೆ ಬಿಟಿಎಸ್ ನಾಗರಾಜ್ ಹಾಗೂ ಮಾಜಿ ಪಾಲಿಕೆ ಸದಸ್ಯೆ ಮಹದೇವಮ್ಮ. ಇದನ್ನು ದಿನೇಶ್ ಗುಂಡೂರಾವ್ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.
ನನ್ನ ಗೆಲವು ಖುಷಿ ತಂದಿದೆ. ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ. ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ ಎಂದು ದಿವಂಗತ ತಾಯಿ ಮಹದೇವಮ್ಮ ಅವರನ್ನು ನೆನೆದು ಐಶ್ವರ್ಯಾ ಭಾವುಕರಾದರು.