ಡಿಕೆಶಿ ರಾಜೀನಾಮೆ ನೀಡುವ ಅಗತ್ಯವಿಲ್ಲ: ಸಿಎಂ ಹೆಚ್ ಡಿಕೆ
ಬೆಂಗಳೂರು, ಜೂ. 21: ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳ ಆರೋಪ ಹಾಗೂ ದೂರಿಗೆ ಸಂಬಂಧಿಸಿದಂತೆ ಜಲಸಂಪನ್ಮೂಲ/ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ರಾಜೀನಾಮೆ ನೀಡಬೇಕಾದ ಸಂದರ್ಭ ಬಂದರೆ, ನಾನೇ ಕೇಳಿ ಪಡೆಯುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅದೇ ರೀತಿ ಸಚಿವ ಶಿವಕುಮಾರ್ ಅವರೂ ಕಾನೂನು ಹೋರಾಟ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆದಾಯ ತೆರಿಗೆ ಇಲಾಖೆ ಮೂಲಕ ಕೇಂದ್ರ ಸರಕಾರ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ವಿರುದ್ಧ ರಾಜಕೀಯ ದ್ವೇಷದಿಂದ ದಾಳಿ ನಡೆಸುತ್ತಿದ್ದು, ದ್ವೇಷದ ರಾಜಕೀಯ ಸರಿಯಲ್ಲ. ದಾಳಿ ನಡೆಸುವ ಕ್ರಮ ಖಂಡನೀಯ ಎಂದು ಕುಮಾರಸ್ವಾಮಿ ಹೇಳಿದರು.
ನೀರು ಬಿಡಿ: ಮಂಡ್ಯದಲ್ಲಿ ಬೆಳೆಗಳಿಗೆ ನೀರು ಬಿಡದೆ ಬೆಳೆಗಳು ಒಣಗುತ್ತಿವೆ. ಈ ವಿಚಾರ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಮಂಡ್ಯ ಭಾಗದಲ್ಲಿ ಬೆಳೆಗಳಿಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಕುಮಾರಸ್ವಾಮಿ, ತಮಿಳುನಾಡಿಗೆ ಈ ತಿಂಗಳು ಬಿಡಬೇಕಾದ ನೀರು ಬಿಟ್ಟಾಗಿದೆ ಎಂದು ಪ್ರತಿಕ್ರಿಯೆ ನೀಡಿದರು.
ಕಾವೇರಿ ನಿರ್ವಹಣೆ ಮಂಡಳಿ ಆದೇಶ ಬರುವವರೆಗೂ ನಾವು ಕಾಯಲು ಆಗುವುದಿಲ್ಲ. ನಮ್ಮ ರೈತರಿಗೆ ಅನುಕೂಲವಾಗುವಂತೆ ಕೆರೆ ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಯಾವುದೇ ಕಾನೂನು ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಮ್ಮ ರೈತರ ಹಿತ ನನಗೆ ಮುಖ್ಯ. ಜಿಲ್ಲೆಯ ಎಲ್ಲ ಇಲಾಖೆಗಳಿಗೂ ಅಧಿಕಾರಿಗಳನ್ನು ಭರ್ತಿ ಮಾಡುತ್ತೇನೆ. ಯಾವುದೇ ತಾಂತ್ರಿಕ ಸಮಸ್ಯೆ ಬಂದರೆ ನೋಡಿಕೊಳ್ಳುತ್ತೇನೆ. ನಾನು ಅಧಿಕಾರ ಪಡೆದು 25 ದಿನ ಮಾತ್ರ ಆಗಿದೆ. ರಾಮನಗರದಲ್ಲಿ ಮಾತ್ರ ಸಮಸ್ಯೆ ಇಲ್ಲ. ಬದಲಾಗಿ ರಾಜ್ಯದ ಎಲ್ಲ ಕಡೆ ಹಲವು ಸಮಸ್ಯೆಗಳಿವೆ. ನನ್ನ ಗಮನ ಈಗ ಬಜೆಟ್ ಮಂಡನೆ ಕಡೆಗಿದೆ ಎಂದು ಅವರು ಹೇಳಿದರು.