ಸೋಮವಾರಪೇಟೆ: ಜಲಪಾತಕ್ಕೆ ಬಿದ್ದು ಯುವಕ ಮೃತ್ಯು
ಸೋಮವಾರಪೇಟೆ,ಜೂ.22: ಪ್ರಸಿದ್ದ ಪ್ರವಾಸಿತಾಣವಾದ ಮಲ್ಲಳ್ಳಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದ ಯುವಕನೋರ್ವ ಆಕಸ್ಮಿಕವಾಗಿ ಕಾಲುಜಾರಿ ಪ್ರಪಾತಕ್ಕೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ಸಂಭವಿಸಿದೆ.
ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್(24) ಎಂಬಾತ ಮೃತಪಟ್ಟ ವ್ಯಕ್ತಿ. ಮನೋಜ್ ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರ ಸಂಜೆ ಸುಮಾರು 4 ಗಂಟೆ ವೇಳೆಗೆ ಮೂರು ಮೋಟಾರು ಬೈಕಿನಲ್ಲಿ ಮಲ್ಲಳ್ಳಿ ಜಲಪಾತ ವೀಕ್ಷಿಸಲೆಂದು ತೆರಳಿದ್ದರು.
ಜಲಪಾತದ ಮೇಲ್ಬಾಗದಲ್ಲಿ ನಿಂತು ಮೊಬೈಲ್ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಆಕಸ್ಮಿಕ ಕಾಲು ಜಾರಿ ಆಯತಪ್ಪಿ ಜಲಪಾತಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತನಾದ ಅನಿಲ್ಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡ ರಾತ್ರಿಯಾದ ಕಾರಣ ಶೋಧ ಕಾರ್ಯ ನಡೆಸಲು ಅಸಾಧ್ಯವಾದ ಹಿನ್ನಲೆಯಲ್ಲಿ ಶನಿವಾರ ಮೃತ ದೇಹವನ್ನು ಹುಡುಕುವ ಕಾರ್ಯ ನಡೆಯಲಿದೆ.