ಅಣ್ವಸ್ತ್ರಗಳ ನಿಯಂತ್ರಣದಲ್ಲಿ ಜಾಗತಿಕ ಶಾಂತಿ
ಇಂದು ವಿಶ್ವದಲ್ಲಿ ಒಂದಿಷ್ಟು ಶಾಂತಿ ಉಳಿದಿದೆಯೆಂದಾದರೆ ಅದಕ್ಕಾಗಿ ಅಣ್ವಸ್ತ್ರಗಳೇ ಕಾರಣವೇನೋ ಎಂದು ನಂಬಿಸುವಂತಹ ಬೆಳವಣಿಗೆಗಳು ನಮ್ಮ ನಡುವೆ ನಡೆಯುತ್ತಿವೆ. ರಾಸಾಯನಿಕ ಅಸ್ತ್ರಗಳಿವೆ ಎಂಬ ನೆಪದಲ್ಲಿ ಇರಾಕ್ನ ಮೇಲೆರಗಿ ಆ ದೇಶವನ್ನು ಸರ್ವನಾಶ ಗೈದ ಅಮೆರಿಕ, ನಿಜಕ್ಕೂ ಇರಾಕ್ ಕೈಯಲ್ಲಿ ರಾಸಾಯನಿಕ ಅಸ್ತ್ರಗಳು ಅಥವಾ ಅಣ್ವಸ್ತ್ರಗಳು ಇದ್ದಿದ್ದರೆ ಅಷ್ಟು ಸುಲಭವಾಗಿ ಎರಗುತ್ತಿತ್ತೇ? ಎನ್ನುವ ಪ್ರಶ್ನೆ ಇರಾಕ್ ನಾಶವಾದ ಇಷ್ಟು ದಿನಗಳ ಬಳಿಕವೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಒಂದಲ್ಲ ಒಂದು ದಿನ ಈ ವಿಶ್ವವನ್ನು ಅಣ್ವಸ್ತ್ರಗಳೇ ಆಹುತಿ ತೆಗೆದುಕೊಳ್ಳಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಯುದ್ಧ ನಡೆದು ನಾಶ ಸಂಭವಿಸಿಯೇ ಬಿಟ್ಟಿತೇನೋ ಎನ್ನುವ ಸನ್ನಿವೇಶಗಳಲ್ಲಿ ಯುದ್ಧವನ್ನು ತಡೆಯುತ್ತಿರುವುದೂ ಅಣ್ವಸ್ತ್ರಗಳೇ ಆಗಿವೆ. ಬಲಾಢ್ಯ ರಾಷ್ಟ್ರಗಳು ತಮ್ಮ ಹೇಳಿಕೆಗಳ ಮೂಲಕವೇ ಪರಸ್ಪರ ಯುದ್ಧ ಸಾರುತ್ತಿವೆ. ನೇರವಾಗಿ ಕದನಕ್ಕಿಳಿಯಲು ಧೈರ್ಯ ತೋರಿಸುತ್ತಿಲ್ಲವಾದರೆ ಅದಕ್ಕೆ ಮುಖ್ಯ ಕಾರಣ ಎಲ್ಲ ಬಲಾಢ್ಯ ರಾಷ್ಟ್ರಗಳ ಕೈಯಲ್ಲಿ ಅಣ್ವಸ್ತ್ರಗಳಿರುವುದೇ ಆಗಿದೆ. ಅಣ್ವಸ್ತ್ರಗಳು ಹೊಂದಿಲ್ಲದ ಎಲ್ಲ ಸಣ್ಣ ಪುಟ್ಟ ರಾಷ್ಟ್ರಗಳನ್ನೂ ಬಲಾಢ್ಯ ರಾಷ್ಟ್ರಗಳು ನುಂಗಿ ಆಪೋಷನ ತೆಗೆದುಕೊಳ್ಳುತ್ತಿವೆ. ಒಂದೆಡೆ ಅಣ್ವಸ್ತ್ರ ನಿಶ್ಶಸ್ತ್ರೀಕರಣದ ಕುರಿತಂತೆ ಮಾತನಾಡುವ ರಾಷ್ಟ್ರಗಳು ಮಗದೊಂದೆಡೆ ತಮ್ಮ ಕ್ರಿಯೆಗಳ ಮೂಲಕವೇ, ಸಣ್ಣ ರಾಷ್ಟ್ರಗಳಿಗೆ ಅಣ್ವಸ್ತ್ರಗಳನ್ನು ಹೊಂದುವ ಅನಿವಾರ್ಯತೆಯನ್ನು ಹೇಳುತ್ತಿವೆ.
ಸಣ್ಣ ಪುಟ್ಟ ರಾಷ್ಟ್ರಗಳೆಲ್ಲ ಅಣ್ವಸ್ತ್ರವನ್ನು ಹೊಂದುವುದನ್ನು ಬಲಾಢ್ಯ ರಾಷ್ಟ್ರಗಳು ನಿರಾಕರಿಸುತ್ತವೆ ಮತ್ತು ನಿಶ್ಶಸ್ತ್ರೀಕರಣಕ್ಕೆ ಒತ್ತಡಗಳನ್ನು ಹೇರುತ್ತವೆ. ಆದರೆ ಅಣ್ವಸ್ತ್ರಗಳು ತನ್ನ ದೇಶದ ಭದ್ರತೆಗೆ ಅಗತ್ಯವಿಲ್ಲ ಎನ್ನುವ ವಾತಾವರಣವನ್ನು ನಿರ್ಮಿಸಲು ಮಾತ್ರ ಈ ಶ್ರೀಮಂತ ರಾಷ್ಟ್ರಗಳು ವಿಫಲವಾಗಿವೆ. ಒಂದೆಡೆ ವಿಶ್ವಾದ್ಯಂತ ಯುದ್ಧದ ಸನ್ನಿವೇಶಗಳಿಗೆ ಕಾರಣವಾಗುತ್ತಲೇ ಮಗದೊಂದೆಡೆ ಅಣ್ವಸ್ತ್ರಗಳ ಕುರಿತಂತೆ ನೀತಿ ಬೋಧಿಸುವುದು ದ್ವಂದ್ವ ನೀತಿಯಾಗಿದೆ. ಉತ್ತರ ಕೊರಿಯ ಮತ್ತು ಅಮೆರಿಕ ನಡುವಿನ ಇತ್ತೀಚಿನ ವಿದ್ಯಮಾನಗಳನ್ನೇ ಗಮನಿಸೋಣ. ಉಭಯ ದೇಶಗಳ ಅಧ್ಯಕ್ಷರುಗಳು ತಮ್ಮ ಕೈಯಲ್ಲಿರುವ ಅಣ್ವಸ್ತ್ರಗಳ ಬಟನ್ಗಳನ್ನು ಒತ್ತಿಯೇ ಬಿಟ್ಟರೇನೋ ಎಂಬಂತೆ ಇತ್ತೀಚಿನವರೆಗೂ ಹೇಳಿಕೆಗಳನ್ನು ನೀಡುತ್ತಿದ್ದರು. ಉತ್ತರ ಕೊರಿಯ ವಿರುದ್ಧ ಅಮೆರಿಕ ಯುದ್ಧವನ್ನು ಘೋಷಿಸಿ ಬಿಟ್ಟಿತು ಎನ್ನುವ ಮಟ್ಟಿಗೆ ಮಾಧ್ಯಮಗಳು ಬೆಳವಣಿಗಳನ್ನು ವಿಶ್ಲೇಷಿಸತೊಡಗಿದವು. ಇದೀಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯದ ಅಧ್ಯಕ್ಷ ಕಿಮ್ ಜಾಂಗ್-ಉನ್ ರ ನಡುವೆ 2018ರ ಜೂನ್ 12ರಂದು ಸಿಂಗಾಪುರದಲ್ಲಿ ನಡೆದ ಶೃಂಗ ಸಭೆಯ ನಂತರದಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯ ಬಳಿಕ ಜಗತ್ತು ಒಂದಿಷ್ಟು ನಿಟ್ಟುಸಿರು ಬಿಟ್ಟಿದೆ.
ಅಮೆರಿಕವು ಉತ್ತರ ಕೊರಿಯಕ್ಕೆ ಬೇಕಾದ ಭದ್ರತಾ ಖಾತರಿಗಳನ್ನು ನೀಡುವುದಕ್ಕೆ ಬದ್ಧವಾಗಿದೆ ಮತ್ತು ಕಿಮ್ ಅವರು ಕೊರಿಯ ಪ್ರದೇಶವನ್ನು ಸಂಪೂರ್ಣವಾಗಿ ಅಣ್ವಸ್ತ್ರ ಮುಕ್ತಗೊಳಿಸುವ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಕಿಮ್ ಅವರ ಭೇಟಿಯ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್, ಅಮೆರಿಕವು ದಕ್ಷಿಣ ಕೊರಿಯದ ಜೊತೆಗೂಡಿ ನಡೆಸುತ್ತಿದ್ದ ಜಂಟಿ ಸೈನಿಕ ಕವಾಯತುಗಳನ್ನು ನಿಲ್ಲಿಸುವುದಾಗಿ ಘೋಷಿಸಿದರು. ಈ ಕವಾಯತುಗಳು ಉತ್ತರ ಕೊರಿಯವನ್ನು ಸದಾ ಯುದ್ಧದ ಭೀತಿಯಲ್ಲಿರಿಸಿತ್ತು. ಅಷ್ಟು ಮಾತ್ರವಲ್ಲದೆ ಮುಂದಿನ ಕೆಲ ಸಮಯದಲ್ಲಿ ದಕ್ಷಿಣ ಕೊರಿಯದಲ್ಲಿರುವ ಅಮೆರಿಕದ 32,000 ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿಯೂ ಹೇಳಿದರು. ಆದರೆ ಪೂರ್ಣವಾಗಿ ಉತ್ತರ ಕೊರಿಯ ಅಣ್ವಸ್ತ್ರದಿಂದ ಹಿಂದೆ ಸರಿಯುತ್ತದೆ ಎನ್ನುವ ಭರವಸೆ ವಿಶ್ವಕ್ಕಿಲ್ಲ. ಎಲ್ಲಿಯವರೆಗೆ ಅಮೆರಿಕದಂತಹ ದೇಶಗಳು ಮುಂದುವರಿಯುತ್ತಿರುವ ದೇಶಗಳಿಗೆ ಹೆಚ್ಚು ಹೆಚ್ಚು ಸವಾಲಾಗಿ ಬೆಳೆಯುತ್ತದೆಯೋ ಅಲ್ಲಿಯವರೆಗೆ ಅಮೆರಿಕದ ಆದೇಶಗಳಿಗೆ ಇತರ ದೇಶಗಳು ಮನ್ನಣೆಕೊಡುವ ಸಾಧ್ಯತೆಗಳು ಕಡಿಮೆ. ಇಷ್ಟಕ್ಕೂ ಜಗತ್ತಿನಲ್ಲಿ ಅಣ್ವಸ್ತ್ರ ಪೈಪೋಟಿಗೆ ಪರೋಕ್ಷವಾಗಿ ಅಮೆರಿಕವೇ ಕಾರಣವಾಗಿದೆ. 1945ರಲ್ಲಿ ಅಮೆರಿಕವು ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ ಅಣುಬಾಂಬುಗಳು ಕಂಡುಕೇಳರಿಯದ ವಿನಾಶವನ್ನು ಸೃಷ್ಟಿಸಿದ ಐದು ವರ್ಷಗಳ ಬಳಿಕ 1950ರ ನವೆಂಬರ್ 30ರಂದು ಅದೇ ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಅವರು ಅಮೆರಿಕವು ಉತ್ತರ ಕೊರಿಯದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಸಿದ್ಧವೆಂದು ಹೇಳಿದ್ದರೆಂಬುದನ್ನು ಮರೆಯಬಾರದು. ಆಗಿನಿಂದಲೂ ಅಮೆರಿಕವು ಉತ್ತರ ಕೊರಿಯದ ವಿರುದ್ಧ ಅಣ್ವಸ್ತ್ರಗಳನ್ನು ಬಳಸುವ ಬೆದರಿಕೆಯನ್ನು ಮುಂದುವರಿಸಿಕೊಂಡೇ ಬಂದಿದೆ.
1958ರಲ್ಲಿ ಅದು ಕೊರಿಯ ಪ್ರಾಂತವನ್ನು ಅಣ್ವಸ್ತ್ರೀಕರಣಗೊಳಿಸಿತು. ಇಂತಹ ಸಾಮ್ರಾಜ್ಯಶಾಹಿ ತಂತ್ರಗಳಿಂದಾಗಿಯೇ ಉತ್ತರ ಕೊರಿಯ ಸಹ ಅಣ್ವಸ್ತ್ರಗಳನ್ನು ಹೊಂದಬೇಕಾಯಿತು ಮತ್ತು ಅದರ ಭಾಗವಾಗಿಯೇ 2006,2009 ಮತ್ತು 2013ರಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಸರಿಸಾಟಿಯಾದ ಅಣ್ವಸ್ತ್ರ ಭೀತಿಯನ್ನು ಹುಟ್ಟಿಸಿ ಸಮತೋಲನವನ್ನು ಕಾಪಾಡಿಕೊಳ್ಳಬೇಕಾಯಿತು. 2002ರಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್, ಮರುವರ್ಷ ತಾನು ಇರಾಕಿನ ಮೇಲೆ ನಡೆಸಲಿದ್ದ ಯುದ್ಧಕ್ಕೆ ಜಾಗತಿಕ ಸಮ್ಮತಿಯನ್ನು ರೂಢಿಸುತ್ತಿರುವಾಗ ಉತ್ತರ ಕೊರಿಯ ಮತ್ತು ಇರಾನನ್ನು ಸಹ ದುಷ್ಟಕೂಟದ ಸದಸ್ಯ ರಾಷ್ಟ್ರವೆಂದು ವರ್ಗೀಕರಿಸಿದ್ದರು. ಹೀಗಾಗಿ ಆ ಎರಡು ದೇಶಗಳು ಅಮೆರಿಕವು ತಮ್ಮಮೇಲೆ ಯಾವಾಗ ಸೈನಿಕ ಆಕ್ರಮಣ ಮಾಡಲಿದೆಯೆಂದು ಸದಾ ಆತಂಕದಿಂದ ನಿರೀಕ್ಷಿಸುವಂತಾಯಿತು.
ಆದರೆ ಅಮೆರಿಕವು ತನ್ನೊಡನೆ ಸದುದ್ದೇಶದಿಂದ ಶಾಂತಿ ಮಾತುಕತೆಗೆ ಮುಂದಾಗುವುದಾದರೆ ಮತ್ತು ತನ್ನ ಭದ್ರತಾ ಕಾಳಜಿಗಳಿಗೆ ಬೇಕಿರುವ ಖಾತರಿಗಳನ್ನು ಒದಗಿಸುವುದಾದರೆ ತಾನು ಶಾಂತಿಗಾಗಿ ಅಣ್ವಸ್ತ್ರಗಳ ಕಾರ್ಯಕ್ರಮವನ್ನು ತ್ಯಜಿಸಿ ಆರ್ಥಿಕ ಬೆಳವಣಿಗೆ ಮತ್ತು ಜನರ ಕಲ್ಯಾಣದ ಮೇಲೆ ಗಮನಹರಿಸುವುದಾಗಿ ಆಗಲೂ ಉತ್ತರ ಕೊರಿಯ ಸ್ಪಷ್ಟ ಮಾತುಗಳಲ್ಲಿ ಘೋಷಿಸಿತ್ತು. ಬರೇ ನಿಷೇಧಗಳ ಮೂಲಕವೇ ಒಂದು ದೇಶದ ಆಂತರಿಕ ಭದ್ರತೆಯನ್ನು ಸಡಿಲಿಸಿ ಅದರ ಮೇಲೆ ಸವಾರಿ ಮಾಡಬಹುದು ಎಂದು ಅಮೆರಿಕ ಭಾವಿಸಿದ್ದಿದ್ದರೆ ಅದು ಅದರ ಮೂರ್ಖತನವಾಗಿದೆ. ಉತ್ತರ ಕೊರಿಯದಲ್ಲೂ ಅಮೆರಿಕ ಇದೇ ತಂತ್ರವನ್ನು ಅನುಸರಿಸಿಕೊಂಡು ಬಂದಿದೆಯಾದರೂ, ಆ ತಂತ್ರ ಬಹುತೇಕ ವಿಫಲಗೊಂಡಿದ್ದು, ಅಮೆರಿಕದ ವಿರುದ್ಧವೇ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆಯನ್ನು ಉತ್ತರ ಕೊರಿಯ ಒಡ್ಡಿತು. ಉತ್ತರ ಕೊರಿಯದ ಜನತೆಗೆ ಆಹಾರ ನಿರಾಕರಿಸುವುದನ್ನು ಅಮೆರಿಕವು ಒಂದು ಯುದ್ಧತಂತ್ರವನ್ನಾಗಿ ಉಪಯೋಗಿಸಿತ್ತು, ಉತ್ತರ ಕೊರಿಯದ ಬಹುಪಾಲು ಭೂಭಾಗವು ಪರ್ವತಶ್ರೇಣಿಗಳಿಂದ ಕೂಡಿದ್ದು ಅಲ್ಪಭಾಗವು ಮಾತ್ರ ಕೃಷಿಯೋಗ್ಯವಾಗಿದೆ. ಹೀಗಾಗಿ ಅದು ತನ್ನ ಬಹುಪಾಲು ಆಹಾರ ಅಗತ್ಯಗಳನ್ನು ಆಮದುಗಳಿಂದಲೇ ಪೂರೈಸಿಕೊಳ್ಳಬೇಕಿದೆ. ಆದರೆ ಈ ಆಮದನ್ನು ಸರಿದೂಗಿಸುವ ಶೇ.90ರಷ್ಟು ವಿನಿಮಯವನ್ನು ದೊರಕಿಸುತ್ತಿದ್ದ ಆ ದೇಶದ ರಫ್ತಿನಮೇಲೆ ನಿಷೇಧವನ್ನು ಹೇರಲಾಗಿದೆ. ಜೊತೆಗೆ ತನ್ನ ಮಾಧ್ಯಮಗಳನ್ನು ಬಳಸಿಕೊಂಡು, ಉತ್ತರ ಕೊರಿಯದ ಬಗ್ಗೆ ಅತ್ಯಂತ ಭೀಕರ ಚಿತ್ರಣವನ್ನು ಜಗತ್ತಿಗೆ ನೀಡತೊಡಗಿತು. ಇದರಿಂದಾಗಿಯೂ ಉತ್ತರ ಕೊರಿಯ ತನ್ನ ಅಣ್ವಸ್ತ್ರ ಯೋಜನೆಯನ್ನು ಬದಲಿಸಲಾಗದ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ ಉತ್ತರ ಕೊರಿಯ ತಾನೂ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಆ ವಲಯದಲ್ಲಿ ಪರಸ್ಪರ ಅಣ್ವಸ್ತ್ರ ಭೀತಿಯ ಸಮತೋಲನವನ್ನು ಸೃಷ್ಟಿಸಿದ್ದರಿಂದಲೇ ಸಾಮ್ರಾಜ್ಯಶಾಹಿ ಅಮೆರಿಕವು ಅಥವಾ ಕನಿಷ್ಠ ಈಗ ಆಡಳಿತ ನಡೆಸುತ್ತಿರುವ ಸರಕಾರವು ತನ್ನ ಕೊರಿಯ ನೀತಿಯನ್ನು ಬದಲಿಸುವಂತೆ ಮಾಡಿದೆ. ಅದೇ ಸಮಯದಲ್ಲಿ ಶಾಂತಿ ಪ್ರಕ್ರಿಯೆಯಲ್ಲಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ವಹಿಸಿದ ಅತ್ಯಪೂರ್ವ ಪಾತ್ರವನ್ನು ಸಹ ಮರೆಯುವಂತಿಲ್ಲ. ಇದೀಗ ಉತ್ತರ ಕೊರಿಯದೊಡನೆ ತನ್ನ ಸಂಬಂಧವನ್ನು ಶಾಂತಿಯುತವಾಗಿಸಿಕೊಂಡು ಇಡೀ ಕೊರಿಯ ಪ್ರಾಂತವನ್ನು ಅಣ್ವಸ್ತ್ರ ಮುಕ್ತಗೊಳಿಸುವ ಜವಾಬ್ದಾರಿ ಅಮೆರಿಕದ ಮೇಲಿದೆ.
ಉತ್ತರ ಕೊರಿಯದ ಬೆಳವಣಿಗೆಗಳಿಂದ ಭಾರತ ಉಪಖಂಡಕ್ಕೂ ಪಾಠವಿದೆ. ಇಂದು ಭಾರತದ ಅಪ್ರಬುದ್ಧ ರಾಜಕಾರಣಿಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಪದೇ ಪದೇ ಯುದ್ಧ ಘೋಷಣೆಗಳನ್ನು ಮಾಡುವುದು ಉಭಯ ದೇಶಗಳ ನಡುವೆ ಅಭದ್ರತೆಯನ್ನು ಸೃಷ್ಟಿಸಿದೆ. ಈ ಅಭದ್ರತೆ ಶಸ್ತ್ರಾಸ್ತ್ರ ಪೈಪೋಟಿಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತ ಅಣ್ವಸ್ತ್ರ ಪರೀಕ್ಷೆ ಮಾಡಿದಾಗಲೆಲ್ಲ ಅದಕ್ಕೆ ಬದಲಾಗಿ ಪಾಕಿಸ್ತಾನವೂ ಅಣ್ವಸ್ತ್ರ ಪರೀಕ್ಷೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧಗಳು ತೀರಾ ಹಳಸಿವೆ. ಪಾಕಿಸ್ತಾನದ ಹಿಡಿತ ಸೇನೆಯ ಕೈಯಲ್ಲಿದೆ ಎನ್ನುವುದು ಗೊತ್ತೇ ಇದೆ. ಭಾರತದ ರಾಜಕೀಯ ನಿರ್ಧಾರಗಳ ಹಿಂದೆ ಹಿಂದುತ್ವ ಉಗ್ರವಾದಿಗಳು ಕೈಯಾಡಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಉಭಯ ದೇಶಗಳ ಮುತ್ಸದ್ದಿತನದ ರಾಜಕಾರಣವಷ್ಟೇ ಉಪಖಂಡದ ಶಾಂತಿಯನ್ನು ಕಾಪಾಡೀತು. ಇತ್ತೀಚೆಗೆ ಸ್ವೀಡನ್ ಸಂಸ್ಥೆಯೊಂದು ತನ್ನ ವರದಿಯಲ್ಲಿ, ಭಾರತಕ್ಕಿಂತ ಹೆಚ್ಚಿನ ಪರಮಾಣು ಬಾಂಬ್ಗಳನ್ನು ಪಾಕಿಸ್ತಾನ ಹೊಂದಿವೆ ಎಂದು ಬಹಿರಂಗ ಪಡಿಸಿತ್ತು. ಈ ವರ್ಷ 140ರಿಂದ 150 ಪರಮಾಣು ಬಾಂಬುಗಳಿವೆ. ಅಂದರೆ ಇದು ಕಳೆದ ವರ್ಷಕ್ಕಿಂತ ಹತ್ತು ಪಟ್ಟು ಹೆಚ್ಚು. ಪಾಕಿಸ್ತಾನದಂತಹ ಬಡತನ ತುಂಬಿದ ದೇಶ ಅಣ್ವಸ್ತ್ರ ಹೊಂದಲು ಈ ಪರಿಯ ಪೈಪೋಟಿಗೆ ಕಾರಣಗಳೇನು? ಭಾರತದ ರಾಜಕಾರಣ ಇದರಲ್ಲಿ ಎಷ್ಟರಮಟ್ಟಿಗೆ ತನ್ನ ಪಾತ್ರ ಹೊಂದಿದೆ ಎನ್ನುವುದನ್ನು ಚಿಂತಿಸುವ ಅಗತ್ಯವಿದೆ. ಸದ್ಯದ ದಿನಗಳಲ್ಲಿ ಯುದ್ಧವೆನ್ನುವುದು ಸಣ್ಣ ಪುಟ್ಟ ಸಾವುನೋವುಗಳಲ್ಲಿ ಮುಗಿಯುವುದಿಲ್ಲ, ಅದು ಅಂತಿಮವಾಗಿ ಪ್ರಪಂಚದ ವಿನಾಶದ ಜೊತೆಗೇ ಕೊನೆಯಾಗುತ್ತದೆ. ಇಂದು ಈ ಕಾರಣದಿಂದಲೇ ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕ ಹಿಂದೆ ಮುಂದೆ ನೋಡುತ್ತಿದೆ. ಭಾರತದ ಉಪಖಂಡದಲ್ಲಿ ಯುದ್ಧ ಭುಗಿಲೇಳದಂತೆ ವಿಶ್ವಸಂಸ್ಥೆ ಎಚ್ಚರಿಕೆಯ ಕಣ್ಣಿನಿಂದ ಕಾಯುತ್ತಿವೆ. ಇದನ್ನು ಪದೇ ಪದೇ ಯುದ್ಧವಾಗಲಿ ಎಂದು ಘೋಷಿಸುವ ಭಾರತದ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಾಗಿದೆ.