ಒಂದು ಹಾಡಿನ ಮೂಲಕ ಸೆಲೆಬ್ರಿಟಿಯಾದ ದಿನಗೂಲಿ ಕಾರ್ಮಿಕನ ಭೇಟಿಯಾದ ಕಮಲ್ ಹಾಸನ್
ಕೆಲವು ದಿನಗಳಿಗೂ ಮೊದಲು ಇವರು ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದರು, ರಬ್ಬರ್ ತುಂಡರಿಸಿ ಟ್ರಕ್ ಗೆ ಲೋಡ್ ಮಾಡುತ್ತಿದ್ದರು. ಇದೀಗ ಅವರು ತಾನು ಮೆಚ್ಚಿದ, ಅನುಸರಿಸುತ್ತಿದ್ದ ಸ್ಟಾರ್ ಗಳಾದ ಶಂಕರ್ ಮಹದೇವನ್ ಹಾಗು ಕಮಲ್ ಹಾಸನ್ ಮುಂದೆ ನಿಂತು ಹಾಡುವಂತಾಗಿದೆ.
ಕಮಲ್ ಹಾಸನ್ ನಟನೆಯ ವಿಶ್ವರೂಪಂ ಸಿನೆಮಾದ 'ಉನ್ನೈ ಕಾಣಾದು" ಹಾಡನ್ನು ರಾಕೇಶ್ ಉಣ್ಣಿ ಎಂಬ ದಿನಗೂಲಿ ಕಾರ್ಮಿಕ ಹಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದಿನವೊಂದರಲ್ಲೇ ಲಕ್ಷಾಂತರ ಮಂದಿ ರಾಕೇಶ್ ಪ್ರತಿಭೆಯನ್ನು ವೀಕ್ಷಿಸುವಂತಾಗಿದ್ದು, ಮೂಲ ಹಾಡನ್ನು ಹಾಡಿದ್ದ ಪ್ರಸಿದ್ಧ ಗಾಯಕ ಶಂಕರ್ ಮಹದೇವನ್ ರಾಕೇಶ್ ರನ್ನು ಹೇಗೆ ಸಂಪರ್ಕಿಸಬಹುದು ಎಂದು ಪ್ರಶ್ನಿಸಿದ್ದರು.
ಇದೆಲ್ಲಾ ಆಗಿ ಎರಡೇ ದಿನಗಳಲ್ಲಿ ರಾಕೇಶ್ ಉಣ್ಣಿಯನ್ನು ಕಮಲ್ ಹಾಸನ್ ಭೇಟಿಯಾಗಿದ್ದಾರೆ. ತನ್ನ ಇತರ ಸಹೋದ್ಯೋಗಿಗಳ ಮುಂದೆ ಹಾಡಿದ್ದ ಹಾಡೊಂದು ತನ್ನನ್ನು ಪ್ರಸಿದ್ಧನನ್ನಾಗಿಸಬಹುದು ಎನ್ನುವ ಕಲ್ಪನೆಯೂ ರಾಕೇಶ್ ಗೆ ಇರಲಿಲ್ಲ. ಹಾಡು ವೈರಲ್ ಆದ ಮೇಲೆ ರಾಕೇಶ್ ಉಣ್ಣಿಗೆ ಕರೆ ಮಾಡಿದ್ದ ಶಂಕರ್ ಮಹದೇವನ್, ಒಳ್ಳೆಯ ಭವಿಷ್ಯವಿದೆ. ಒಂದು ದಿನ ಭೇಟಿಯಾಗಲು ಇಚ್ಛಿಸಿದ್ದೇನೆ ಎಂದು ತಿಳಿಸಿದ್ದರು. ಇದೀಗ ರಾಕೇಶ್ ಉಳಗನಾಯಗನ್ ಕಮಲ್ ಹಾಸನ್ ರನ್ನು ಭೇಟಿಯಾಗಿದ್ದಾರೆ. ರಾಕೇಶ್ ಜೊತೆ ಆತ್ಮೀಯತೆಯಿಂದ ಮಾತನಾಡಿದ ಕಮಲ್ ಒಂದು ಬಾರಿ ತನ್ನ ಮುಂದೆ 'ಉನ್ನೈ ಕಾಣಾದು' ಹಾಡನ್ನು ಹಾಡುವಂತೆ ಕೇಳಿಕೊಂಡರು. ಕೂಡಲೇ ರಾಕೇಶ್ ಕಮಲ್ ಮುಂದೆ ಹಾಡು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.