ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ : ಗಲ್ಲಾ ಜಯದೇವ್
ಲೋಕಸಭೆಯಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಟಿಡಿಪಿ ಸಂಸದ ಜಯದೇವ್ ಕಿಡಿ
ಹೊಸದಿಲ್ಲಿ, ಜು.20: ಆಂಧ್ರಪ್ರದೇಶಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಭರವಸೆಯನ್ನು ಕೇಂದ್ರ ಸರಕಾರ ಈಡೇರಿಸಿಲ್ಲ ಎಂಬ ವಿಚಾರದ ಬಗ್ಗೆ ಟಿಡಿಪಿಯ ಸಂಸದ ಗಲ್ಲಾ ಜಯದೇವ್ ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರು.
ಆಂಧ್ರಪ್ರದೇಶದ 5 ಕೋಟಿ ಜನರಿಗೆ ಅನ್ಯಾಯವಾಗಿದೆ.ತೆಲಂಗಾಣ ಹೊಸ ರಾಜ್ಯವಲ್ಲ. ಆಂಧ್ರಪ್ರದೇಶವೇ ಹೊಸ ರಾಜ್ಯ . ಕೇಂದ್ರ ಸರಕಾರ ಆಂಧ್ರದ ಬಗ್ಗೆ ಭೇದಭಾವ ಹೊಂದಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಜಯದೇವ್ ವಾಗ್ದಾಳಿ ನಡೆಸಿದರು.
ಇದು ಟಿಡಿಪಿ -ಬಿಜೆಪಿ ನಡುವಿನ ಯುದ್ಧವಲ್ಲ. ಆಂಧ್ರಪ್ರದೇಶ ಜನರ ಧರ್ಮಯುದ್ದವಾಗಿದೆ ಎಂದು ಜಯದೇವ್ ಅಭಿಪ್ರಾಯಪಟ್ಟರು.
4 ವರ್ಷ ದಾಟಿದರೂ ಆಂಧ್ರಕ್ಕೆ ನೀಡಲಾಗಿದ್ದ ಯಾವುದೇ ಭರವಸೆ ಈಡೇರಿಲ್ಲ. ಪ್ರಧಾನಿ ಆಂಧ್ರಕ್ಕೆ ಮೋಸ ಮಾಡಿದ್ದಾರೆ.ರಾಜ್ಯ ವಿಭಜನೆಯ ಬಳಿಕ ಆಂಧ್ರ ಬಹಳಷ್ಟನ್ನು ಕಳೆದುಕೊಂಡಿದೆ. ಆನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಆಂಧ್ರಕ್ಕೆ ರಾಜಧಾನಿಯೂ ಇಲ್ಲ. ಅವೈಜ್ಞಾನಿಕವಾಗಿ ಆಂಧ್ರವನ್ನು ವಿಭಜಿಸಲಾಗಿದ್ದು, ಆಸ್ತಿ ತೆಲಂಗಾಣಕ್ಕೆ ಆಂಧ್ರಕ್ಕೆ ಸಾಲದ ಹೊರೆ ನೀಡಲಾಗಿದೆ ಎಂದು ಜಯದೇವ್ ಹೇಳಿದರು.
ಕರ್ನಾಟಕದಲ್ಲಿ ಗಾಲಿ ಜನಾರ್ದನ ರೆಡ್ಡಿ ಕುಟುಂಬದ ಮೇಲೆ ಹಲವು ಕೇಸ್ ಗಳಿದ್ದರೂ ಅವರ ಪರ ಬಿಜೆಪಿ ನಿಂತಿದೆ. ಬಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ. ಕೇಂದ್ರ ಸರಕಾರ ಕೆಲವರ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಗಲ್ಲಾ ಜಯದೇವ್ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದಿಂದ ಆಂಧ್ರಕ್ಕೆ 1 ಪೈಸೆಯೂ ಸಿಕ್ಕಿಯೂ ಸಿಕ್ಕಿಲ್ಲ. ಯಾಕೆ ಈ ತಾರತಮ್ಯ ? ದಯವಿಟ್ಟು ರಾಜ್ಯದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿ ಎಂದು ಜಯದೇವ್ ಮನವಿ ಮಾಡಿದರು.
ಸದನದಲ್ಲಿ ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಭರತ್ ಅನೇ ನೇನು ಎಂಬ ಚಿತ್ರವನ್ನು ಜಯದೇವ್ ಪ್ರಸ್ತಾಪಿಸಿದರು. ಚಿತ್ರದಲ್ಲಿ ಕೊಟ್ಟ ಭರವಸೆಯ ಈಡೇರಿಸಲು ನಾಯಕ ಹೋರಾಡುತ್ತಿರುವುದನ್ನು ನೆನಪಿಸಿದರು.