ಬೆಂಗಳೂರು: ಸ್ಕೂಟಿಗೆ ಲಾರಿ ಢಿಕ್ಕಿ; ವಿದ್ಯಾರ್ಥಿನಿ ಮೃತ್ಯು
ಬೆಂಗಳೂರು, ಜು.22: ಸಿಮೆಂಟ್ ಮಿಶ್ರಣ ಲಾರಿಯೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಾಟನ್ಪೇಟೆ ನಿವಾಸಿ, ಬಿ.ಕಾಂ. ವಿದ್ಯಾರ್ಥಿನಿ ಪ್ರೀತಿ (19) ಮೃತಪಟ್ಟಿದ್ದು, ಘಟನೆಯಲ್ಲಿ ಈಕೆಯ ಸಹೋದರಿ ಲಾವಣ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ 7:30 ಗಂಟೆ ಸುಮಾರಿಗೆ ಕುಂಬಿಗಲ್ ರಸ್ತೆಯ ಮೂಲಕ ಲಾಲ್ಬಾಗ್ಗೆ ವಾಯುಹಾರಕ್ಕೆ ಸಹೋದರಿಯರು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಲಾವಣ್ಯ ಸ್ಕೂಟಿ ಚಲಾಯಿಸುತ್ತಿದ್ದರು. ಪ್ರೀತಿ ಹಿಂಬದಿ ಕುಳಿತಿದ್ದರು. ಆಗ ಹಿಂಬದಿಯಿಂದ ವೇಗವಾಗಿ ಬಂದ ಸಿಮೆಂಟ್ ಮಿಶ್ರಣ ಮಾಡುವ ಲಾರಿ ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಬಿದ್ದಿದ್ದು, ಪ್ರೀತಿಯ ತಲೆಯ ಮೇಲೆ ಲಾರಿಯ ಚಕ್ರ ಹರಿದು ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ತಕ್ಷಣ ಲಾರಿ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.