ಅವಿಶ್ವಾಸ ನಿರ್ಣಯದ ಮೇಲಿನ ಪ್ರಧಾನಿ ಭಾಷಣ ದ್ವೇಷಪೂರಿತ: ಕಪಿಲ್ ಸಿಬಲ್
ಮುಂಬೈ, ಜು. 22: ಲೋಕಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ‘ಪೂರ್ಣ ದ್ವೇಷಪೂರಿತ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಶನಿವಾರ ಹೇಳಿದ್ದಾರೆ. ‘‘ದೇಶ ದ್ವೇಷದಿಂದ ನಡೆಯಲಾರದು. ನಮ್ಮ ದೇಶ ಒಂದು ಕುಟುಂಬ. ಪ್ರಧಾನಿ ಅವರು ಶುಕ್ರವಾರ ಲೋಕಸಭೆಯಲ್ಲಿ ಮಾಡಿದ ಭಾಷಣ ಪೂರ್ಣ ದ್ವೇಷಪೂರಿತ. ಇಂದಿನ ಅಗತ್ಯ ದೇಶ ಹಾಗೂ ಸಂವಿಧಾನ ರಕ್ಷಿಸುವುದು.’’ ಎಂದು ಅವರು ಹೇಳಿದರು. ಯೂತ್ ಕಾಂಗ್ರೆಸ್ ರವಿವಾರ ಇಲ್ಲಿ ಆಯೋಜಿಸಿದ್ದ ‘ಭಾರತ್ ಬಚಾವೊ’ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಆಡಳಿತವನ್ನು ಬಿಜೆಪಿ ನಡೆಸುತ್ತಿಲ್ಲ. ಆರ್ಎಸ್ಎಸ್ ನಡೆಸುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಸಂಸ್ಥೆಗಳನ್ನು ತಮ್ಮ ಸ್ವಂತ ಹಿತಾಸಕ್ತಿಗೆ ಬಳಸುತ್ತಿರುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಅವರು ಹೇಳಿದರು. ಕಾಂಗ್ರೆಸ್ ಯಾರನ್ನೂ ದ್ವೇಷಿಸಲಾರದು. ಯುವ ಕಾಂಗ್ರೆಸ್ ಸಾಮರ್ಥ್ಯದಿಂದ 2019ರ ಲೋಕಸಭೆ ಚುನಾವಣೆಯಲ್ಲಿ ನಾವು ಜಯ ಗಳಿಸಲಿದ್ದೇವೆ ಹಾಗೂ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಲಿದ್ದೇವೆ ಎಂದು ಅವರು ಹೇಳಿದರು.