ಕಳಸ: ರಸ್ತೆ ಗುಂಡಿಯಲ್ಲಿ ದೋಣಿ ಬಿಟ್ಟು ಪ್ರತಿಭಟನೆ
ದೂರು ನೀಡಿದರೂ ಸ್ಪಂದಿಸದ ಲೋಕೋಪಯೋಗಿ ಇಲಾಖೆ: ಆರೋಪ
ಕಳಸ, ಜು.22: ಇಲ್ಲಿಯ ಮಂಜಿನಕಟ್ಟೆ ಸಮೀಪ ರಸ್ತೆಯಲ್ಲಿ ಉಂಟಾದ ಹೊಂಡಕ್ಕೆ ಕಳಸದ ಕೆಲ ಯುವಕರು ದೋಣಿ ಮಾಡಿ ಬಿಡುವುದರ ಮೂಲಕ ಪ್ರತಿಭಟಣೆ ನಡೆಸಿದ್ದಾರೆ.
ಕಳೆದ ಜನವರಿಯಲ್ಲಿ ತಿಂಗಳಿನಲ್ಲಿ ನಡೆದ ಈ ರಸ್ತೆಯ ಕಾಮಗಾರಿ ಕೇವಲ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು ಶಿಥಿಲಾವಸ್ಥೆ ತಲುಪಿದ ಈ ರಸ್ತೆಯ ಅವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಗಿ ಈಜುಕೊಳದ ಉದ್ಘಾಟನೆಯನ್ನು ಸನ್ನಿಲಿಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ ಎಂದು ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತೇಲಿಬಿಟ್ಟಿದ್ದರು. ಇದು ಸಾಕಷ್ಟು ವೈರಲ್ ಆಗಿ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ರವಿವಾರ ಮಂಜಿನಕಟ್ಟೆ ಸಮೀಪ ಗುಂಡಿಯಲ್ಲಿ ಕಾಗದದ ದೋಣಿಗಳನ್ನು ಮಾಡಿ ಬಿಡುವುದರ ಮೂಲಕ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಕಳಸ ನಾಗರಿಕ ಟಿಟ್ಟು ತೋಮಸ್, ಈಜುಕೊಳದ ಉದ್ಘಾಟನೆಗೆ ನಟ ನಟಿಯರು ಬರುತ್ತಾರೆಂದು ವ್ಯಂಗ್ಯ ಚಿತ್ರವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು. ಅದಕ್ಕಾಗಿ ಇವತ್ತು ದೋಣಿ ಬಿಡುವುದರ ಮುಖಾಂತರ ಉದ್ಘಾಟನೆಯನ್ನು ಮಾಡಿದ್ದೇವೆ. ಲೋಕೋಪಯೋಗಿ ಇಲಾಖೆಯ ಪ್ರತಿಯೊಂದು ಕಾಮಗಾರಿಯು ಕಳಪೆ ಮಟ್ಟದಲ್ಲಿ ನಡೆಯುತ್ತಿರುವುರಿಂದ ಹೋಬಳಿಯ ಬಹುತೇಕ ರಸ್ತೆಗಳು ಶಿಥಿಲಾವಸ್ಥೆ ಕಾಣುತ್ತಿವೆ. ಈ ರೀತಿಯ ಕಳಪೆ ಕಾಮಗಾರಿ ಮಾಡಿದ ಸಂಬಂದಪಟ್ಟ ಇಂಜಿನಿಯರನ್ನು ಕೂಡಲೇ ಅಮಾನತು ಮಾಡಿ. ಕಳೆದ ಐದು ವರ್ಷಗಳಿಂದ ಮಾಡಿದ ಕಾಮಗಾರಿಯ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಳಸದ ನಾಗರಿಕರಾದ ವೀರೇಂದ್ರ, ಕೆ.ಸಿ.ಮಹೇಶ್, ಅನಿಲ್,ಸುನೀಲ್, ಶಿವಾನಂದ, ಹರ್ಷ, ಸುಬ್ರಮಣ್ಯ, ಇರ್ಷಾದ್ ಇತರರು ಇದ್ದರು.