ಲೋಕಸಭೆಯಲ್ಲಿ ಅಧಿಕಾರಿಯೊಬ್ಬರಿಂದ ಪ್ರತಿಪಕ್ಷದ ಮೇಲೆ ಕಣ್ಗಾವಲು:ಖರ್ಗೆ ಆರೋಪ
ಹೊಸದಿಲ್ಲಿ,ಜು.23: ಲೋಕಸಭೆಯಲ್ಲಿ ಸೋಮವಾರ ಅಧಿಕಾರಿಗಳ ಗ್ಯಾಲರಿಯಿಂದ ಅಧಿಕಾರಿಯೋರ್ವರು ಸದನದಲ್ಲಿನ ಚರ್ಚೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದುದನ್ನು ಬಲವಾಗಿ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು,ಅವರು ಪ್ರತಿಪಕ್ಷ ಸದಸ್ಯರ ಮೇಲೆ ಕಣ್ಗಾವಲು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವಿಷಯವನ್ನು ತಾನು ಪರಿಶೀಲಿಸುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಭರವಸೆ ನೀಡಿದರು.
ಪ್ರಶ್ನೆವೇಳೆಯಲ್ಲಿ ಅಧಿಕಾರಿಗಳ ಗ್ಯಾಲರಿಯಲ್ಲಿ ನಿಂತುಕೊಂಡಿದ್ದ ಅಧಿಕಾರಿಯೋರ್ವರು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದನ್ನು ಮತ್ತು ಸದನದಲ್ಲಿ ಉಪಸ್ಥಿತರಿದ್ದ ಪ್ರತಿಪಕ್ಷ ಸದಸ್ಯರನ್ನು ಎಣಿಕೆ ಮಾಡುತ್ತಿದ್ದನ್ನು ಸ್ಪೀಕರ್ ಗಮನಕ್ಕೆ ತಂದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು,ಇದು ಪ್ರತಿಪಕ್ಷದ ಸದಸ್ಯರ ಮೇಲೆ ಇಟ್ಟಿರುವ ಕಣ್ಗಾವಲು ಆಗಿದೆ ಎಂದು ತನ್ನ ಪಕ್ಷದ ಸದಸ್ಯರ ಆಕ್ರೋಶಭರಿತ ಪ್ರತಿಭಟನೆಗಳ ನಡುವೆ ಹೇಳಿದರು. ತಾನು ಈ ವಿಷಯವನ್ನು ಎತ್ತುತ್ತಿದ್ದಂತೆ ಆ ಅಧಿಕಾರಿ ಸದನದಿಂದ ಹೊರಗೆ ಹೋಗಿದ್ದಾರೆ ಎಂದೂ ಅವರು ತಿಳಿಸಿದರು.
ತಾನು ಕುಳಿತಿದ್ದ ಸ್ಥಳದಿಂದ ತನಗೆ ಅಧಿಕಾರಿಗಳ ಗ್ಯಾಲರಿ ಕಾಣುತ್ತಿಲ್ಲ ಎಂದು ತಿಳಿಸಿದ ಸ್ಪೀಕರ್,ಈ ವಿಷಯವನ್ನು ತಾನು ಪರಿಶೀಲಿಸುವುದಾಗಿ ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು.
ಅಧಿಕಾರಿ ತನ್ನ ಸಚಿವಾಲಯಕ್ಕೆ ಸೇರಿದ್ದು,ಅವರು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು ಎಂದು ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಅರ್ಜುನ ರಾಮ ಮೇಘ್ವಾಲ್ ಹೇಳಿದರು.
ಲೋಕಸಭಾ ಕಲಾಪಗಳು ದೂರದರ್ಶನದಲ್ಲಿ ನೇರ ಪ್ರಸಾರವಗುತ್ತಿವೆೆ ಮತ್ತು ಸದನದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪ್ರತಿಯೊಬ್ಬರೂ ನೋಡಬಹುದಾಗಿದೆ ಎಂದು ಹೇಳಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು,ಸದನದಲ್ಲಿ ಯಾರು ಕಣ್ಣು ಹೊಡೆಯುತ್ತಿದ್ದಾರೆ ಎನ್ನ್ನುವುದನ್ನೂ ಜನರು ಕಾಣಬಹುದಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿಯವರನ್ನು ಪರೋಕ್ಷವಾಗಿ ಕುಟುಕಿದರು. ಈ ಸಂದರ್ಭ ರಾಹುಲ್ ಸದನದಲ್ಲಿ ಉಪಸ್ಥಿತರಲಿಲ್ಲ.