ಮಕ್ಕಾ ತಲುಪಿದ ಮಂಗಳೂರಿನ ಹಾಜಿಗಳ ಮೊದಲ ತಂಡ
ಸೌದಿ ಅರೇಬಿಯಾ: ಮದೀನಾದಲ್ಲಿ 8 ದಿವಸಗಳ ಕಾಲ ಝಿಯಾರತ್ ನಡೆಸಿ , ಹಜ್ಜ್ ಕರ್ಮ ನಿರ್ವಹಿಸಲು ಮಕ್ಕಾದೆಡೆಗೆ ಹಜ್ಜಾಜಿಗಳು ಪ್ರಯಾಣ ಬೆಳೆಸಿದ್ದಾರೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ ಹಜ್ಜ್ ವಾಲೇಂಟಿಯರ್ ಕೋರ್ ಮದೀನಾ ಸದಸ್ಯರು ಮಂಗಳೂರಿನ ಮೊದಲ ಹಜ್ಜಾಜಿಗಳ ತಂಡವನ್ನು ಬೀಳ್ಕೊಟ್ಟರು. ಹಜ್ಜಾಜಿಗಳ ಲಗೇಜ್ ಗಳನ್ನು ಪ್ಯಾಕ್ ಮಾಡಲು ಸಹಕರಿಸಿದ ಮದೀನಾ ಎಚ್.ವಿ.ಸಿ ಕಾರ್ಯಕರ್ತರು, ಹಾಜಿಗಳ ಕೊಠಡಿಗಳಿಂದ ಲಗೇಜ್ ಗಳನ್ನು ಬಸ್ ಗೆ ಸಾಗಿಸಲು ನೆರವಾದರು.
ಹಜ್ಜಾಜಿಗಳ ತಂಡ ಮಕ್ಕಾ ನಗರದ ಅಫಯಾರ್ ಹಾಗೂ ಅಝೀಝಿಯಾ ತಲುಪಿದ್ದು, ಮಕ್ಕಾದಲ್ಲಿರುವ ಎಚ್.ವಿ.ಸಿ ಕಾರ್ಯಕರ್ತರು ದಣಿದ ಹಜ್ಜಾಜಿಗಳಿಗೆ ಝಂಝಂ ನೀರು, ಫಲಹಾರ ಕ್ವಿಟ್ ನೀಡಿ ಸ್ವಾಗತಿಸಿದರು. ಹಜ್ಜಾಜಿಗಳು ತಂಗುವ ರೂಮ್ ಗಳಿಗೆ ತೆರಳಿದ ಮಕ್ಕಾ ಎಚ್.ವಿ.ಸಿ ಕಾರ್ಯಕರ್ತರು, ಆಯಾಸದಿಂದ ಬಂದ ಹಜ್ಜಾಜ್ ಗಳ ಲಗೇಜ್ ಗಳನ್ನು ಅವರವರ ಕೊಠಡಿಗಳಿಗೆ ತಲುಪಿಸಲು ಸಹಕರಿಸಿದ್ದು, ಹಾಜಿಗಳಿಗೆ ಉಮ್ರಾ ನಿರ್ವಹಿಸಲು ಅಮೀರ್ ವ್ಯವಸ್ಥೆಯನ್ನು ಕೂಡ ಕಲ್ಪಿಸಿದ್ದಾರೆ.
ನಾವು ಮಂಗಳೂರು ತಲುಪಿದರೆ ನಮ್ಮನ್ನು ಯಾವ ರೀತಿ ನಮ್ಮ ಬಂಧುಬಳಗದವರು ಆದರದಿಂದ ಸ್ವಾಗತಿಸುತ್ತಾರೆಯೋ, ಆ ರೀತಿ ಮಕ್ಕಾದಲ್ಲಿರುವ ಕೆಸಿಎಫ್ ಕಾರ್ಯಕರ್ತರು ನಮ್ಮನ್ನು ಸ್ವಾಗತಿಸಿದರು. ವಾರದ ಹಿಂದೆ ಮಂಗಳೂರಿನಿಂದ ಮದೀನಾ ಏರ್ಪೋರ್ಟ್ ತಲುಪಿದ ಸಂಧರ್ಭ ಆಯಾಸ ಹಾಗೂ ಗಲಿಬಿಲಿಯಿಂದ ನನ್ನ ಬಳಿಯಿದ್ದ ಪಾಸ್ಪೋರ್ಟ್, ಮತ್ತಿತರ ದಾಖಲೆ ಹಾಗೂ ಸೌದಿ ರಿಯಾಲ್ ಗಳಿದ್ದ ಕವರ್ ಏರ್ಪೋರ್ಟ್ ಸಿಬ್ಬಂದಿ ಗೆ ನೀಡಿದ್ದು ಆತ ಹಣವನ್ನು ನನಗೆ ಹಿಂತಿರುಗಿಸಿಲ್ಲ. ಈ ಬಗ್ಗೆ ಮದೀನಾದಲ್ಲಿ ಕೆಸಿಎಫ್ ಕಾರ್ಯಕರ್ತರಿಗೆ ತಿಳಿಸಿದ್ದು, ತಕ್ಷಣ ಕಾರ್ಯ ಪ್ರವೃತರಾದ ಕೆಸಿಎಫ್ ತಂಡ ಇಂಡಿಯನ್ ಎಂಬಸಿಯೊಂದಿಗೆ ಮಾತುಕತೆ ನಡೆಸಿ ಪರಿಹಾರ ಧನ ನೀಡಲು ಸಹಕರಿಸಿದ್ದಾರೆ ಎಂದು ಮಂಗಳೂರಿನ ಬಜ್ಪೆಯಿಂದ ಆಗಮಿಸಿದ ಇಸ್ಮಾಯಿಲ್ ಹಾಜಿ ತಿಳಿಸಿದರು. ಇಷ್ಟೇ ಅಲ್ಲ ಮದೀನಾದ ಕೊಠಡಿಯಲ್ಲಿ ಹೃದಯಾಘಾತಗೊಂಡ ಮಂಗಳೂರಿನ ಹಾಜಿಯೊಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.
ಮಾತ್ರವಲ್ಲ ಉಳ್ಳಾಲದ ಹಾಜಿಗಳಿಬ್ಬರ ಸ್ಟಾಂಪಿಂಗ್ ಮಾಡದೇ ಅವರನ್ನು ಮರಳಿ ಭಾರತಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದ ಸಂದರ್ಭ ಭಾರತೀಯ ರಾಯಭಾರಿ ಅಧಿಕಾರಿಗಳೊಡನೆ ಚರ್ಚಿಸಿ ಸ್ಟಾಂಪಿಂಗ್ ಮಾಡುವಂತೆ ಒತ್ತಾಯಿಸಿ ಸಫಲರಾಗಿದ್ದೇವೆ ಎನ್ನುವುದು ಕೆಸಿಎಫ್ ಮದೀನಾ ಹಜ್ಜ್ ವಾಲೇಂಟಿಯರ್ ಕೋರ್ ಸದಸ್ಯರ ಮಾತು.
ಇನ್ನು ಮದೀನಾದಿಂದ ಮಕ್ಕಾಕ್ಕೆ ಆಗಮಿಸಿದ ನಮಗೆ ಕೆಸಿಎಫ್ ಕಾರ್ಯಕರ್ತರು ಉತ್ತಮ ಸಹಾಯ-ಸಹಕಾರವನ್ನು ನೀಡಿದ್ದಾರೆ ಎಂದು ಎಸ್.ವೈ.ಎಸ್ ಉಳ್ಳಾಲ ಸುಂದರಭಾಗ್ ಬ್ರಾಂಚ್ ನಾಯಕ ಅಹ್ಮದ್ ಉಳ್ಳಾಲ ತಿಳಿಸಿದ್ದಾರೆ. ಹಜ್ಜ್ ಸಂದರ್ಭಗಳಲ್ಲಿ ಎಲ್ಲಾ ದಿವಸಗಳಲ್ಲಿಯೂ ನಾವು ಹರಂ ಪರಿಸರದಲ್ಲಿ ಹಜ್ಜಾಜಿಗಳ ಸೇವೆಯಲ್ಲಿ ನಿರತರಾಗುತ್ತೇವೆ, ಹರಂ ಪರಿಸರದಲ್ಲಿ ಕರ್ತವ್ಯ ದಲ್ಲಿರುವ ಪೊಲೀಸರು ಕೂಡ ನಮ್ಮ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸದ ವಿಚಾರವಾಗಿದೆ ಎಂದು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್.ವಿ.ಸಿ ಮಕ್ಕಾ ಸೆಕ್ಟರ್ ಕೊರ್ಡಿನೆಟರ್ ಇಕ್ಬಾಲ್ ಕಕ್ಕಿಂಜೆ ತಿಳಿಸಿದ್ದಾರೆ.
ಈ ವೇಳೆ ಎಚ್.ವಿ.ಸಿ ಸೆಕ್ಟರ್ ನಾಯಕರಾದ ಹನೀಫ್ ಸಖಾಫಿ ಬೊಳ್ಮಾರ್, ಮೂಸಾ ಹಾಜಿ ಕಿನ್ಯ, ಎಚ್.ವಿ.ಸಿ ಹಜ್ಜ್ ತರಬೇತಿದಾರರಾದ ಉಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು,, ಎಚ್.ವಿ.ಸಿ ಸೆಕ್ಟರ್ ಮಿಡಿಯಾ ಕನ್ವಿನರ್ ಕಲಂದರ್ ಶಾಫಿ ಅಸೈಗೋಳಿ, ಅಬ್ದುಲ್ ಹಮೀದ್ ಉಳ್ಳಾಲ, ನವಾಝ್ ಇಮ್ದಾದಿ ಬಜಾಲ್, ಬಶೀರ್ ಕೆಜೆಕಾರ್, ಹಾರಿಸ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.