ಬೊಫೋರ್ಸ್ನ್ನು ಮೀರಿಸಿದ ರಫೇಲ್
ತನ್ನೆಲ್ಲ ಹೊಣೆಗಾರಿಕೆಗಳಿಂದ ಪಾರಾಗಲು ಬಿಜೆಪಿ ಪದೇ ಪದೇ ಗುರಾಣಿಯಾಗಿ ಬಳಸುವ ಎರಡು ವಿಷಯಗಳು, ಒಂದು ಇಂದಿರಾಗಾಂಧಿಯ ಕಾಲದಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯಾದರೆ ಇನ್ನೊಂದು ರಾಜೀವ್ಗಾಂಧಿಯವರ ಕಾಲದಲ್ಲಿ ನಡೆದಿರುವ ಬೊಫೋರ್ಸ್ ಹಗರಣ. ಈ ಎರಡು ವಿಷಯಗಳಿಗಾಗಿ ಕಾಂಗ್ರೆಸ್ ಈಗಲೂ ತೆರಿಗೆ ಕಟ್ಟುತ್ತಲೇ ಇದೆ. ಬೊಫೋರ್ಸ್ ಹಗರಣದ ವಿರುದ್ಧ ಮೊದಲು ಜೋರು ಧ್ವನಿಯಲ್ಲಿ ಮಾತನಾಡಿದ್ದು ರಾಜೀವ್ಗಾಂಧಿಯವರ ಸಚಿವ ಸಂಪುಟದಲ್ಲಿದ್ದ ವಿ. ಪಿ. ಸಿಂಗ್. ಬಳಿಕ ಕಾಂಗ್ರೆಸನ್ನು ತೊರೆದು ಅದರ ವಿರುದ್ಧ ಸುದೀರ್ಘ ಸಮರ ಸಾರಿದರು. ಬೊಫೋರ್ಸ್ ಹಗರಣ ರಾಜೀವ್ಗಾಂಧಿಯ ‘ಮಿ. ಕ್ಲೀನ್’ ವರ್ಚಸ್ಸಿನ ಮೇಲೆ ಭಾರೀ ಕಳಂಕವನ್ನುಂಟು ಮಾಡಿತು. ಯಾರೋ ಮಾಡಿದ ತಪ್ಪುಗಳನ್ನು ರಾಜೀವ್ಗಾಂಧಿಯವರು ಹೊತ್ತುಕೊಳ್ಳಬೇಕಾಯಿತು.
ಈ ದೇಶವನ್ನು ‘ಕಂಪ್ಯೂಟರ್ ಯುಗ’ಕ್ಕೆ ಕೊಂಡೊಯ್ದ ರಾಜೀವ್ಗಾಂಧಿ ಅಪರೂಪದ ರಾಜಕೀಯ ಮುತ್ಸದ್ದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೊಫೋರ್ಸ್ನಲ್ಲಿ ರಾಜೀವ್ಗಾಂಧಿಯ ಪಾತ್ರವನ್ನು ನ್ಯಾಯಾಲಯ ಕೂಡ ಸಂಪೂರ್ಣ ನಿರಾಕರಿಸಿದೆ. ಆದರೂ ಬೊಫೋರ್ಸ್ ಹೆಸರಿನಲ್ಲಿ ಕಾಂಗ್ರೆಸ್ ಮೇಲೆ ಬಿಜೆಪಿಯ ದಾಳಿ ಮುಂದುವರಿದಿದೆ. ಬಿಜೆಪಿ ಆಗಾಗ ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿಯ ಕಾಲವನ್ನು ನೆನಪಿಸುವುದಿದೆ. ವಿಪರ್ಯಾಸವೆಂದರೆ ನರೇಂದ್ರ ಮೋದಿಯ ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯನ್ನು ದೇಶದ ಶ್ರೀಸಾಮಾನ್ಯರು, ಪತ್ರಕರ್ತರು ಎದುರಿಸುತ್ತಾ ಬಂದಿದ್ದಾರೆ. ಹೇಗೆ ತುರ್ತುಪರಿಸ್ಥಿತಿಯ ಕಾಲದಲ್ಲಿ, ಇಂದಿರಾ ಸರಕಾರದ ವಿರುದ್ಧ ಮಾತನಾಡಿದ ಪತ್ರಕರ್ತರನ್ನು ಜೈಲಿಗೆ ಹಾಕಲಾಗಿತ್ತೋ, ಅದೇ ಪರಿಸ್ಥಿತಿ ಮೋದಿ ಆಡಳಿತದಲ್ಲೂ ಇದೆ.
ಸರಕಾರವನ್ನು ವಿಮರ್ಶಿಸುವ, ಟೀಕಿಸುವ ಮುಕ್ತ ವಾತಾವರಣ ದೇಶದಲ್ಲಿ ಇಲ್ಲ. ಸರಕಾರದ ಅಕ್ರಮಗಳನ್ನು ಬಯಲಿಗೆಳೆದ ಪತ್ರಕರ್ತರನ್ನು ಬೇರೆ ಬೇರೆ ರೀತಿಯ ತಂತ್ರಗಳಿಂದ ಬಗ್ಗು ಬಡಿಯಲಾಗುತ್ತಿದೆ. ಎನ್ಡಿ ಟಿವಿಯ ಮೇಲೆ ನಡೆದ ಐಟಿ ದಾಳಿ, ಹಾಗೆಯೇ ಆ ಟಿವಿಯನ್ನು ಸ್ಧಗಿತಗೊಳಿಸಲು ಸರಕಾರ ನಡೆಸಿದ ಪ್ರಯತ್ನ ಇದರ ಭಾಗವೇ ಆಗಿದೆ. ಇತ್ತೀಚೆಗೆ ಎಬಿಪಿ ಟಿವಿ ವಾಹಿನಿಯ ಮೂವರು ಪತ್ರಕರ್ತರು, ಸರಕಾರವನ್ನು ಟೀಕಿಸಿದ ಕಾರಣಕ್ಕಾಗಿ ಉದ್ಯೋಗವನ್ನು ಕಳೆದುಕೊಳ್ಳಬೇಕಾಯಿತು. ಶ್ರೀಸಾಮಾನ್ಯರು ತಮ್ಮದೇ ಹಣಕ್ಕಾಗಿ ಬ್ಯಾಂಕ್ಗಳ ಮುಂದೆ ಸರದಿಯಲ್ಲಿ ನಿಂತದ್ದು ಸ್ವಾತಂತ್ರೋತ್ತರ ಭಾರತದ ಇತಿಹಾಸದ ಕಪ್ಪು ಅಧ್ಯಾಯ. ತುರ್ತುಪರಿಸ್ಥಿತಿಯಲ್ಲೂ ಇಂತಹದೊಂದು ಸ್ಥಿತಿಯನ್ನು ಜನಸಾಮಾನ್ಯರು ಎದುರಿಸಿರಲಿಲ್ಲ. ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯೂ ಇನ್ನೊಂದು ತುರ್ತುಪರಿಸ್ಥಿತಿಯೇ ಆಗಿದೆ. ಬೀದಿ ರೌಡಿಗಳು, ಗೂಂಡಾಗಳು ಆ ಕಾಯ್ದೆಯ ಫಲಾನುಭವಿಗಳಾದರು. ರೈತರ ದನಗಳ ಮೇಲೆ ಅವರಿಂದು ಹಕ್ಕು ಸಾಧಿಸುತ್ತಿದ್ದಾರೆ. ಜಾನುವಾರು ಮಾರಾಟಕ್ಕೆ ಒಯ್ಯುವ ರೈತನ ಹತ್ಯೆಯಾಗುವಂತಹ ಸ್ಥಿತಿಗೆ ಈ ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯೂ ಕಾರಣವಾಗಿದೆ. ದೇಶದಲ್ಲಿ ದೊಂಬಿ ಹತ್ಯೆಗಳು ಮೋದಿ ಆಡಳಿತದಲ್ಲಿ ತಾರಕಕ್ಕೆ ಮುಟ್ಟಿವೆ. ಜೊತೆಗೆ ಬಿಜೆಪಿಯ ಹಲವು ನಾಯಕರೇ ಅತ್ಯಾಚಾರ ಪ್ರಕರಣಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ದೇಶವನ್ನು ಇಂತಹದೊಂದು ಸ್ಥಿತಿಗೆ ತಂದಿಟ್ಟ ನರೇಂದ್ರ ಮೋದಿ ಸರಕಾರಕ್ಕೆ ತುರ್ತುಪರಿಸ್ಥಿತಿಯನ್ನು ಟೀಕಿಸುವ ಯಾವ ಹಕ್ಕೂ ಇಲ್ಲ.
ಎಲ್ಲಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ ಬಿಜೆಪಿ ಸರಕಾರ ಬೊಫೋರ್ಸ್ ಹಗರಣದ ಜೊತೆಗೆ ಸ್ಪರ್ಧೆಗಿಳಿದಿರುವುದು. ನಿರಪರಾಧಿತ್ವ ಸಾಬೀತಾದ ಬಳಿಕವೂ ಕಾಂಗ್ರೆಸ್ನ್ನು ಬೊಫೋರ್ಸ್ ಹಗರಣದ ಹೆಸರಲ್ಲಿ ಟೀಕಿಸುವ ಮೋದಿ ಸರಕಾರ, ಇದೀಗ ಬೊಫೋರ್ಸ್ ಹಗರಣಕ್ಕಿಂತಲೂ ದೊಡ್ಡ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ. ರಕ್ಷಣಾ ಇಲಾಖೆಯ ಭ್ರಷ್ಟಾಚಾರದಲ್ಲಿ ಎನ್ಡಿಎ ಸರಕಾರ ಗುರುತಿಸಿಕೊಂಡಿರುವುದು ಇದೇ ಮೊದಲೇನೂ ಅಲ್ಲ. ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಅವಧಿಯಲ್ಲಿ ನಡೆದ ‘ತೆಹೆಲ್ಕಾ’ ಕುಟುಕು ಕಾರ್ಯಾಚರಣೆಯಲ್ಲಿ ದೇಶರಕ್ಷಣೆಯಲ್ಲಿ ದೇಶಭಕ್ತರ ಬಣ್ಣ ಬಯಲಾಯಿತು. ಆ ಅವಧಿಯಲ್ಲೇ ಸೈನಿಕರ ಶವಪೆಟ್ಟಿಗೆಯಲ್ಲಿ ನಡೆದ ಭ್ರಷ್ಟಾಚಾರ ಬೆಳಕಿಗೆ ಬಂತು. ಇದೀಗ ಬೊಫೋರ್ಸ್ಗಿಂತಲೂ ದೊಡ್ಡ ಹಗರಣವೆಂದು ಗುರುತಿಸಲ್ಪಟ್ಟ ರಫೇಲ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ ಆರೋಪವನ್ನು ಬಿಜೆಪಿ ಎದುರಿಸುತ್ತಿದೆ. ಫ್ರಾನ್ಸ್ನಿಂದ 58,000 ಕೋಟಿ ರೂ. ವೆಚ್ಚದಲ್ಲಿ 36 ಯುದ್ಧ ವಿಮಾನಗಳನ್ನು ಖರೀದಿಸಲು ಸರಕಾರವು 2016ರಲ್ಲಿ ಮಾಡಿದ್ದ ಒಪ್ಪಂದ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಮಾತನಾಡುತ್ತಲೇ ಬಂದಿದ್ದಾರಾದರೂ ಮಾಧ್ಯಮಗಳು ಆ ಧ್ವನಿಯನ್ನು ಮುಚ್ಚಲು ಸಕಲ ಪ್ರಯತ್ನ ಮಾಡುತ್ತಾ ಬಂದಿತ್ತು. ಆದರೆ ಇದೀಗ ಬಿಜೆಪಿಯ ಮಾಜಿ ನಾಯಕರಾದ ಅರುಣ್ ಶೌರಿ, ಯಶವಂತ ಸಿನ್ಹಾ ಅವರೇ ಈ ಹಗರದ ವಿರುದ್ಧ ಮಾತನಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಮಾತನಾಡುವುದಕ್ಕೂ, ಬಿಜೆಪಿಯೊಂದಿಗೆ ಮೊನ್ನೆ ಮೊನ್ನೆಯವರೆಗೂ ಇದ್ದ ಹಿರಿಯ ನಾಯಕರು ಮಾತನಾಡುವುದಕ್ಕೂ ವ್ಯತ್ಯಾಸವಿದೆ. ಪ್ರಕರಣದ ಗಂಭೀರತೆಯನ್ನು ಇದು ಹೇಳುತ್ತದೆ. 1986ರಲ್ಲಿ ಬೊಫೋರ್ಸ್ ಹಗರಣವನ್ನು ಬಯಲುಗೊಳಿಸಿದ ಪತ್ರಕರ್ತರಲ್ಲಿ ಅರುಣ್ ಶೌರಿ ಮುಂಚೂಣಿಯಲ್ಲಿದ್ದರು. ಇದೀಗ ಅದೇ ಪತ್ರಕರ್ತರು ಹೇಳುತ್ತಿದ್ದಾರೆ: ‘‘ರಫೇಲ್ ಹಗರಣ, ಬೊಫೋರ್ಸ್ಗಿಂತಲೂ ದೊಡ್ಡದು’’
ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರಕಾರ, ದೇಶದ ರಕ್ಷಣಾ ಇಲಾಖೆಯೊಳಗೆ ಮೂಗು ತೂರಿಸುವ ಮೂಲಕ ಹತ್ತು ಹಲವು ಅನಾಹುತಗಳನ್ನು ಮಾಡಿದೆ. ಸರ್ಜಿಕಲ್ ಸ್ಟ್ರೈಕ್ನ್ನು ರಾಜಕೀಯಗೊಳಿಸಿದ್ದು ಅದರಲ್ಲಿ ಪ್ರಮುಖವಾದುದು. ಸುಧಾರಣೆಯ ಹೆಸರಿನಲ್ಲಿ ರಕ್ಷಣಾ ಇಲಾಖೆಯನ್ನು ವಿದೇಶಿಯರಿಗೆ ತೆರೆದುಕೊಟ್ಟದ್ದು ಮೋದಿ ಸರಕಾರ. ಇದೀಗ ರಫೇಲ್ ಹಗರಣ ಮೋದಿ ಸರಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿ ಸರಕಾರದ ವಿರುದ್ಧ ಇಷ್ಟೊಂದು ದೊಡ್ಡ ಆರೋಪ ಕೇಳಿ ಬರುತ್ತಿದ್ದರೂ, ಇದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತುಟಿ ಬಿಚ್ಚುತ್ತಿಲ್ಲ. ನಿಜಕ್ಕೂ ನರೇಂದ್ರಮೋದಿಯವರ ಪಾತ್ರ ಇದರಲ್ಲಿಲ್ಲ ಎಂದಾದರೆ, ಕನಿಷ್ಠ ತನಿಖೆಗಾದರೂ ಆದೇಶ ನೀಡಬಹುದಿತ್ತು. ಆ ಮೂಲಕ, ಸರಕಾರದ ಮೇಲಿರುವ ಅಪನಂಬಿಕೆಗಳನ್ನು ನಿವಾರಿಸಬಹುದಿತ್ತು. ದುರದೃಷ್ಟವಷಾತ್, ಈ ಕಳಂಕವನ್ನು ತನ್ನ ಹೆಗ್ಗಳಿಕೆಯೇನೋ ಎಂಬಂತೆ ಮೋದಿ ಭಾವಿಸಿದ್ದಾರೆ.
ರಫೇಲ್ ಖರೀದಿಯಲ್ಲಿ ಅವ್ಯವಹಾರವಾಗಿದ್ದರೆ, ಅದು ದೇಶದ್ರೋಹಕ್ಕೆ ಸಮವಾದುದು. ಈ ದೇಶಕ್ಕಾಗಿ ಪ್ರಾಣ ತ್ಯಾಗಗೈದ ಸೈನಿಕರಿಗೆ ಮಾಡಿದ ಅವಮಾನವದು. ದೇಶ ಕಾಯುವ ಸೈನಿಕರ ನೈತಿಕ ಶಕ್ತಿಯ ಮೇಲೆ ಅದು ದುಷ್ಪರಿಣಾಮ ಮಾಡಲಿದೆ.ಆದುದರಿಂದ, ಈ ಖರೀದಿಯ ಲೆಕ್ಕ ಪರಿಶೋಧನೆ ಮೋದಿ ಸರಕಾರದ ಕರ್ತವ್ಯವಾಗಿದೆ. ತಕ್ಷಣ ಪ್ರಧಾನಿ ಮೋದಿ, ಈ ಆರೋಪಕ್ಕೆ ಪ್ರತಿಕ್ರಿಯಿಸಬೇಕಾಗಿದೆ ಮತ್ತು ಸತ್ಯಾಸತ್ಯತೆಯನ್ನು ತನಿಖೆಗೆ ಒಳಪಡಿಸಬೇಕಾಗಿದೆ. ರಫೇಲ್ ಹಗರಣ ಆರೋಪಕ್ಕೆ ಬೊಫೋರ್ಸ್ ಹಗರಣ ಉತ್ತರವಲ್ಲ ಎನ್ನುವುದನ್ನು ಇನ್ನಾದರೂ ಅವರು ಅರ್ಥೈಸಿಕೊಂಡು ಮುಂದುವರಿಯಬೇಕಾಗಿದೆ.