ಕೇರಳ: ಮನೆ ಟೆರೇಸ್ನಲ್ಲೇ ಹೆಲಿಕಾಪ್ಟರ್ ಇಳಿಸಿ 26 ಮಂದಿಯ ರಕ್ಷಣೆ
ಕೊಚ್ಚಿ ಆ. 19: ರಕ್ಷಣಾ ಕಾರ್ಯಾಚರಣೆ ಸಂದರ್ಭ ಕ್ಯಾಪ್ಟನ್ ರಾಜ್ ಕುಮಾರ್ ಸೀ ಕಿಂಗ್ ಹೆಲಿಕಾಪ್ಟರ್ ಅನ್ನು ಮನೆಯೊಂದರ ಟೆರೇಸ್ ಮೇಲೆ ಇಳಿಸಿ ಸಂತ್ರಸ್ತರನ್ನು ರಕ್ಷಿಸುವ ಮೂಲಕ ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದಾರೆ. ದಕ್ಷಿಣ ನೌಕಾ ಕಮಾಂಡ್ಗೆ ಸೇರಿದ ಅಧಿಕಾರಿ ರಾಜ್ ಕುಮಾರ್ ಮನೆಯೊಂದರ ಮೇಲೆ ಇಳಿಸುವ ಮೂಲಕ ಅಲ್ಲಿದ್ದ 26 ಮಂದಿ ನೆರೆ ಸಂತ್ರಸ್ತರನ್ನು ರಕ್ಷಿಸಿದ್ದಾರೆ. ಈ ದೃಶ್ಯದ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. ಪಾಲಕ್ಕಾಡ್ ಮೂಲದ ರಾಜ್ ಕುಮಾರ್ ಈ ಹಿಂದೆ ಸಂಭವಿಸಿದ ಒಕ್ಹಿ ಚಂಡಮಾರುತದ ಸಂದರ್ಭ ನಡೆಸಿದ ದಣಿವರಿಯದ ರಕ್ಷಣಾ ಕಾರ್ಯಾಚರಣೆಗೆ ಶೌರ್ಯ ಚಕ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪರಿಹಾರ ಶಿಬಿರಗಳಲ್ಲಿ ರೋಗ ಭೀತಿ
ಮಹಾಮಳೆಗೆ ನೆರೆ ಪೀಡಿತವಾಗಿರುವ ಕೇರಳದ ಪರಿಹಾರ ಶಿಬಿರಗಳಲ್ಲಿ 20 ಲಕ್ಷಕ್ಕೂ ಜನರಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಆದರೆ, ಈ ಶಿಬಿರಗಳಲ್ಲಿ ರೋಗ ಹರಡುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೂರು ತಿಂಗಳ ಹಿಂದೆ ಆರಂಭವಾದ ಮನ್ಸೂನ್ ಮಳೆಯಿಂದ ಉಂಟಾದ ನೆರೆ ಸಂತ್ರಸ್ತರಿಗೆ ವಾಸ್ತವ್ಯ ಕಲ್ಪಿಸಿರುವ ಪರಿಹಾರ ಶಿಬಿರಗಳಲ್ಲಿ ನೀರಿನಿಂದ ರೋಗ ಹಾಗೂ ಗಾಳಿಯಿಂದ ಹರಡುವ ರೋಗ ನಿಯಂತ್ರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.