ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಗೌತಮ್ ಗಂಭೀರ್?
ದಿಲ್ಲಿ ಕ್ರಿಕೆಟಿಗ ಸೇರಲಿದ್ದಾರೆ ಎನ್ನಲಾದ ಪಕ್ಷ ಯಾವುದು ಗೊತ್ತಾ?
ಹೊಸದಿಲ್ಲಿ, ಆ.19: ಭಾರತ ತಂಡದ ಮಾಜಿ ಆರಂಭಿಕ ದಾಂಡಿಗ ಗೌತಮ್ ಗಂಭೀರ್ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ದಿಲ್ಲಿಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬಿಜೆಪಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನಿಗೆ ಈ ಅವಕಾಶ ನೀಡಲಿದೆ ಎನ್ನಲಾಗಿದೆ.
ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ನವ್ ಜೋತ್ ಸಿಂಗ್ ಸಿಧು, ಮುಹಮ್ಮದ್ ಕೈಫ್, ಪ್ರವೀಣ್ ಕುಮಾರ್, ವಿನೋದ್ ಕಾಂಬ್ಳೀ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿಯವರ ನಂತರ ಕ್ರಿಕೆಟ್ ನಿಂದ ರಾಜಕೀಯಕ್ಕೆ ಕಾಲಿಟ್ಟವರಾಗಲಿದ್ದಾರೆ ಗಂಭೀರ್.
2012ರಿಂದ ಗಂಭೀರ್ ಟಿ20 ಪಂದ್ಯಗಳನ್ನಾಡಿಲ್ಲ. 2016ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದರು. ಬಿಜೆಪಿಯು ಮುಂದಿನ ಚುನಾವಣೆಯ ಗೆಲುವಿಗಾಗಿ ಈಗಾಗಲೇ ಸೆಲೆಬ್ರಿಟಿಗಳನ್ನು ಭೇಟಿಯಾಗಿ ಕೇಂದ್ರ ಸರಕಾರದ ಬಗ್ಗೆ ಪ್ರಚಾರ ಮಾಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಬಗ್ಗೆ ಗಂಭೀರ್ ಅವರನ್ನು ಮನವೊಲಿಸಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.