ಕೊಡಗಿನ 15ಕ್ಕೂ ಹೆಚ್ಚು ಸಂತ್ರಸ್ತರು ಮೈಸೂರಿಗೆ
ಮೈಸೂರು, ಆ.19: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭಯಭೀತರಾಗಿದ್ದ ಸುಮಾರು 15ಕ್ಕೂ ಹೆಚ್ಚು ಮಂದಿ ಜೀವ ಉಳಿಸಿಕೊಂಡು ಮೈಸೂರಿನ ಕಾವೇರಿ ಕೊಡವ ಸಮಾಜ ಭವನಕ್ಕೆ ಬಂದು ಉಳಿದುಕೊಂಡಿದ್ದಾರೆ.
ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದವರಾದ ಸಂತ್ರಸ್ತರು, 10 ಕೀ.ಲೋ ಮೀಟರ್ ಬೆಟ್ಟಗುಡ್ಡ ಹತ್ತಿ ಬಂದಿದ್ದಾರೆ. ಇವರನ್ನು ಮೈಸೂರಿನ ಶಕ್ತಿನಗರದಲ್ಲಿರುವ ಕಾವೇರಿ ಕೊಡವ ಸಮಾಜದಲ್ಲಿ ಇರಿಸಲಾಗಿದೆ.
ಪತ್ರಿಕೆಯೊಂದಿಗೆ ಮಾತನಾಡಿದ ಸಂತ್ರಸ್ತರೊಬ್ಬರು, ನಮ್ಮ ಜೀವನದಲ್ಲಿ ಇದೇ ಮೊದಲ ಸಲ ಇಂತಹ ಪ್ರವಾಹವನ್ನು ಕಂಡಿರುವುದು. ನಮ್ಮ ಕಣ್ಣೆದುರೇ ಮನೆ, ತೋಟ ಎಲ್ಲ ಮುಳುಗಡೆಯಾದವು. ಇದನ್ನು ಕಂಡು ಕಂಗೆಟ್ಟ ನಾವು ರಾತ್ರಿಯೆಲ್ಲಾ ಗುಡ್ಡ, ಕಲ್ಲು, ಮುಳ್ಳುಗಳ ಮಧ್ಯೆ ನಡೆದು ಹೇಗೋ ಇಲ್ಲಿಗೆ ಬಂದು ತಲುಪಿದೆವು. ಇನ್ನು ನಮ್ಮಂತೆ ನೂರಾರು ಜರು ಪ್ರವಾಹಕ್ಕೆ ಸಿಲುಕಿಕೊಂಡಿದ್ದಾರೆ. ದಯವಿಟ್ಟು ಸರಕಾರ ಅವರನ್ನು ರಕ್ಷಿಸಬೇಕು. ನಮಗೆ ತಿನ್ನಲು ಅನ್ನವಿಲ್ಲ, ಮನೆ ಇಲ್ಲದೆ ದಿಕ್ಕೆಟ್ಟು ಹೋಗಿದ್ದೇವೆ. ಸರಕಾರ ನಮ್ಮ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.