ಹಾಸನ: ನಿರಾಶ್ರಿತರ ಶಿಬಿರದಲ್ಲಿ ಸಚಿವ ಎಚ್.ಡಿ ರೇವಣ್ಣ ಬಿಸ್ಕೆಟ್ ಎಸೆದ ವೀಡಿಯೊ ವೈರಲ್
ಹಾಸನ, ಆ. 20: ಲೋಕೋಪಯೋಗಿ ಹಾಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಹಾಸನದ ರಾಮನಾಥಪುರದ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ, ಬಿಸ್ಕೆಟ್ ಪ್ಯಾಕೆಟ್ ಗಳನ್ನು ಜನರತ್ತ ಎಸೆಯುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವಿವಾರ ನಿರಾಶ್ರಿತ ಸಮಸ್ಯೆ ಆಲಿಸಲು ರಾಮನಾಥಪುರಕ್ಕೆ ಹೋಗಿದ್ದ ಸಚಿವ ರೇವಣ್ಣ ನಿರಾಶ್ರಿತರೊಂದಿಗೆ ನಡೆದುಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪ್ರವಾಹ ನಿರಾಶ್ರಿತರಿಗೆ ಬಿಸ್ಕೆಟ್ ಎಸೆಯುವ ಮೂಲಕ ಅಮಾನವೀಯತೆಯನ್ನು ಮೆರೆದಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಭಾರೀ ಮಳೆಗೆ ಕಂಗಾಲಾದ ಜನರಿಗೆ ಜಿಲ್ಲೆಯ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹಾಸನ ಕೆಎಂಎಫ್ನಿಂದ ಉಚಿತವಾಗಿ ಸಾವಿರಾರು ಲೀಟರ್ ಹಾಲು ಮತ್ತು ಬಿಸ್ಕೆಟ್ ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದರು. ಆದರೆ, ರವಿವಾರ ಗಂಜಿ ಕೇಂದ್ರಕ್ಕೆ ತೆರಳಿದ್ದ ವೇಳೆ ನಿರಾಶ್ರಿತರನ್ನು ಸಚಿವರು ಉಪಚರಿಸಿದ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಮನೆ, ನೆಲ ಕಳೆದುಕೊಂಡು ಆಸರೆಯ ನಿರೀಕ್ಷೆಯಲ್ಲಿರುವ ಜನರು ತಾವು ಗೆಲ್ಲಿಸಿರುವ ಜನಪ್ರತಿನಿಧಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಸಚಿವರನ್ನು ಸುತ್ತುವರೆದಿದ್ದರು. ಆದರೆ, ಮಾನವೀಯತೆ ಮರೆತ ಸಚಿವರು ಸಂತ್ರಸ್ತರೆಡೆಗೆ ಬಿಸ್ಕೆಟ್ ಎಸೆಯುವ ಮೂಲಕ ಪ್ರಾಣಿಗಳಂತೆ ಉಪಚರಿಸಿದ್ದಾರೆ ಎಂದು ಹಲವರು ದೂರಿದ್ದಾರೆ.