"ಪ್ರಧಾನಿ ಮೋದಿ ಕೊಡಗಿಗೆ ಬರಲಿ"
ಬೆಂಗಳೂರು, ಆ.20: ಅತಿವೃಷ್ಟಿಯಿಂದ ಸಮಸ್ಯೆಗೆ ಸಿಲುಕಿರುವ ಕೊಡಗಿಗೆ ಪ್ರಧಾನಿ ನರೇಂದ್ರ ಮೋದಿ ಬರಬೇಕು. ಜೊತೆಗೆ ಕೇಂದ್ರ ಸರಕಾರ 5 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.
ಸೋಮವಾರ ನಗರದ ರಾಜಭವನದ ಎದುರು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಹೋರಾಟಗಾರರು ಸತ್ಯಾಗ್ರಹ ನಡೆಸಿ, ಕೇಂದ್ರ ಸರಕಾರ ಕೂಡಲೇ ಕೊಡಗಿಗೆ 5 ಸಾವಿರ ಕೋಟಿ ರೂ. ನೀಡಬೇಕೆಂದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಕೊಡಗು ಜನರ ಜೀವನ ಅಸ್ತವ್ಯಸ್ತವಾಗಿದೆ. ದಿನ ಕಳೆಯಲು ಹರಸಾಹಸ ಪಡುತ್ತಿದ್ದಾರೆ. ಕೊಡಗು ಸಹಜ ಸ್ಥಿತಿಗೆ ಬರಲು ಇನ್ನು ಸಾಕಷ್ಟು ಸಮಯ ಬೇಕಾಗುತ್ತದೆ ಎಂದರು. ಇದರ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಕೊಡಗಿಗೆ ಭೇಟಿ ನೀಡಿದ್ದಾರೆ. ಆದರೆ ರಾಜ್ಯ ಸರಕಾರದ ನೆರವು ನಿಧಾನವಾಗಿದೆ ಎಂದು ಅವರು ಆರೋಪಿಸಿದರು.
ಕೊಡಗು ನಿರಾಶ್ರಿತರಿಗೆ ಕೂಡಲೇ ನೆರವು ನೀಡಲು ಪ್ರಧಾನಿಯವರು ಕೊಡಗಿಗೆ 5 ಸಾವಿರ ಕೋಟಿ ರೂ. ಕೊಡಬೇಕು. ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ತಲಾ 25 ಲಕ್ಷ ರೂಪಾಯಿ ನೆರವು ನೀಡಬೇಕು. ರಕ್ಷಣಾ ಕಾರ್ಯ ವಿಳಂಬವಾಗಬಾರದು. ಪಕ್ಕದ ರಾಜ್ಯ ಕೇರಳಕ್ಕೆ ಕೇಂದ್ರ ಸರಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದರು.
ಇದೇ ವೇಳೆ ವಾಟಾಳ್ ನಾಗರಾಜ್ ಹಾಗೂ ಬೆಂಬಲಿಗರು ರಾಜಭವನ ಮುಂದೆ ಪ್ರತಿಭಟನೆ ಮಾಡಲು ಹೊರಟಾಗ ಪೊಲೀಸರು ರಸ್ತೆ ಮದ್ಯೆ ತಡೆದು ಅವರನ್ನು ವಶಕ್ಕೆ ಪಡೆದು, ತದನಂತರ ಬಿಡುಗಡೆ ಮಾಡಿದರು.
‘ಸಚಿವ ರೇವಣ್ಣನನ್ನು ಕೈಬಿಡಿ’
ಕೊಡಗು ನೆರೆ ಸಂತ್ರಸ್ತರಿಗೆ ಸಚಿವ ಎಚ್.ಡಿ.ರೇವಣ್ಣ ಬಿಸ್ಕೇಟ್ ಎಸೆದು ಅವಮಾನ ಮಾಡಿದ್ದಾರೆ. ಇಂತಹ ದುರಹಂಕಾರಿಗಳು ರಾಜಕೀಯದಲ್ಲಿ ಇರಬಾರದು. ಹೀಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವುದು. ಒಬ್ಬ ಮಂತ್ರಿಯಾಗಿ ದುರ್ನಡತೆ ತೋರಿಸುವುದು ಸರಿಯಲ್ಲ. ಇಂಥವರು ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಇರಬಾರದು. ಕೂಡಲೇ ರಾಜೀನಾಮೆ ನೀಡಲಿ ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.