ಹನೂರು: 'ಶಕ್ತಿ ಕಾರ್ಯಕ್ರಮ'ಕ್ಕೆ ಶಾಸಕ ಆರ್.ನರೇಂದ್ರ ಚಾಲನೆ
ಹನೂರು,ಆ.20: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದಿಂದ ಗುರುತಿಸಿ ಪ್ರತಿಯೊಂದು ಬ್ಲಾಕ್, ಗ್ರಾಮ ಮತ್ತು ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹೆಚ್ಚಿಸಲು ಕೈಗೊಂಡಿರುವ ವಿನೂತನ ಕಾರ್ಯಕ್ರಮವೇ ಶಕ್ತಿ ಪ್ರಾಜೆಕ್ಟ್ ಆಗಿದೆ ಎಂದು ಶಾಸಕ ಆರ್ ನರೇಂದ್ರ ರಾಜುಗೌಡ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕಾರ್ಯಕ್ರಮದ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ರಾಜಕೀಯ ಪಕ್ಷದ ಸಂಘಟನೆಗಾಗಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರವಹಿಸುತ್ತಿದ್ದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದಿಂದ ಗುರುತಿಸಿ ಪ್ರತಿಯೊಂದು ಬ್ಲಾಕ್, ಗ್ರಾಮ ಮತ್ತು ಮತಗಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವನಿಯನ್ನು ಹೆಚ್ಚಿಸಲು ಕೈಗೊಂಡಿರುವ ವಿನೂತನ ಕಾರ್ಯಕ್ರಮವೇ ಶಕ್ತಿ ಪ್ರಾಜೆಕ್ಟ್ ಆಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ನೇರ ಸಂಪರ್ಕವನ್ನು ಸಾಧಿಸಬಹುದಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತನ ಅಭಿಪ್ರಾಯ ಮತ್ತು ಸಲಹೆಗಳಿಗೆ ಧ್ವನಿಗೂಡಿಸಬಹುದಾಗಿದೆ. ಈ ಪ್ರಾಜೆಕ್ಟ್ಗೆ ನೋಂದಾಯಿಸಿದ ಸದಸ್ಯರಿಗೆ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ನೇರವಾಗಿ ತಿಳಿಯಬಹುದಾಗಿದೆ. ಕಾರ್ಯಕರ್ತರು ಪಕ್ಷ ಸಂಘಟನೆಗಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಶಕ್ತಿ ಪ್ರಾಜೆಕ್ಟ್ನಲ್ಲಿ ಗುರುತಿಸಿಕೊಳ್ಳಬಹುದಾಗಿದ್ದು, ಪ್ರತಿಯೊಬ್ಬರ ಶ್ರಮವನ್ನೂ ಗುರುತಿಸಬಹುದಾಗಿದೆ. ಆದುದರಿಂದ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 50ಸಾವಿರ ಕಾರ್ಯಕರ್ತರನ್ನು ನೋಂದಾಯಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಮತ್ತು ಲೋಕಸಭಾ ಚುನಾವಣೆಗಳಿಗೆ ರೆಡಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಬ್ಲಾಕ್ನ ಅಧ್ಯಕ್ಷರು, ಮಹಿಳಾ ಘಟಕಗಳು, ಯುವ ಕಾಂಗ್ರೆಸ್ ಘಟಕಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿ ಹಿಂದಿನ ದಿನಗಳಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಬೇಕಾದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಭಾವಚಿತ್ರ ನೀಡಿ ಇನ್ನಿತರ ಪೂರಕ ದಾಖಲೆಗಳನ್ನು ನೀಡಿ ನಿಗದಿತ ಶುಲ್ಕದೊಂದಿಗೆ ಸದಸ್ಯತ್ವ ಪಡೆಯಬೇಕಾಗಿತ್ತು. ಆದರೆ ಆಧುನಿಕತೆ ಬೆಳೆದಂತೆಲ್ಲಾ ವಿಧಾನಗಳು ಸರಳೀಕೃತಗೊಳ್ಳುತ್ತಿದ್ದು, ಕ್ಷಣ ಮಾತ್ರದಲ್ಲಿ ಸದಸ್ಯತ್ವ ಪಡೆಯಬಹುದಾಗಿದೆ. ಈ ಒಂದು ಶಕ್ತಿ ಕಾರ್ಯಕ್ರಮ ಪಕ್ಷ ಸಂಘಟನೆ ದೃಷ್ಠಿಯಲ್ಲಿ ವಿನೂತನ ಯೋಜನೆಯಾಗಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಮಹಾತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಅಧ್ಯಕ್ಷೆ ಶಿವಮ್ಮ, ತಾ.ಪಂ.ಅಧ್ಯಕ್ಷ ರಾಜು, ಪ.ಪಂ.ಅಧ್ಯಕ್ಷೆ ಮಮತಾ ಮಹದೇವು, ಹನೂರು ಕ್ಷೇತ್ರದ ಉಸ್ತುವಾರಿ ನಾಗವಾರನರೇಂದ್ರ ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ಪ.ಪಂ ಸದಸ್ಯ ರಾಜುಗೌಡ, ತಾ.ಪಂ ಸದಸ್ಯ ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೆಂಪಯ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆರಾಜು, ಹನೂರು ಕ್ಷೇತ್ರದ ಯೂವ ಕಾಂಗ್ರೇಸ್ ಅಧ್ಯಕ್ಷ ರಾಹಿಲ್, ಮಹಿಳಾ ಘಟಕದ ಅಧ್ಯಕ್ಷರಾದ ಅಥಿಯಾ ಬೇಗಂ, ರಾಧಮಣಿ ಮುಖಂಡರಾದ ವೆಂಕಟರಮಣನಾಯ್ಡು, ಪಾಳ್ಯ ಕೃಷ್ಣ, ಮಾದೇಶ್, ಹೂಗ್ಯಂ ಸಿದ್ಧರಾಜು, ಭೀಮಣ್ಣ ಇನ್ನಿತರರು ಹಾಜರಿದ್ದರು.