ನಾಡಿನ ಪುಣ್ಯ ನದಿಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ: ಯಡಿಯೂರಪ್ಪ
ಬೆಂಗಳೂರು, ಆ.21: ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ಭಸ್ಮವನ್ನು ರಾಜ್ಯದ ವಿವಿಧ ಪುಣ್ಯ ನದಿಗಳಲ್ಲಿ ವಿಸರ್ಜನೆ ಮಾಡುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಂಗಳವಾರ ನಗರದ ಮಲ್ಲೇಶ್ವರಂನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ.22 ರಂದು ಹೊಸದಿಲ್ಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಎಲ್ಲ ರಾಜ್ಯಗಳ ಅಧ್ಯಕ್ಷರ ಸಭೆ ಕರೆದಿದ್ದು, ಪುಣ್ಯ ನದಿಗಳಲ್ಲಿ ವಿಸರ್ಜನೆ ಮಾಡಲು ಅಟಲ್ ಜೀಯವರ ಅಸ್ಥಿಯನ್ನು ನೀಡಲಿದ್ದಾರೆ ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಸ್ಥಿ ಕಳಸವನ್ನು ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ ಮೆರವಣಿಗೆಯಲ್ಲಿ ಕರೆ ತಂದು ಪುಷ್ಪಾರ್ಚನೆ ಕಾರ್ಯಕ್ರಮ ಮಾಡಲಾಗುವುದು. ಅಷ್ಟೇ ಅಲ್ಲದೆ, ಆ.23ರಂದು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮತ್ತು ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತದೆ. ಆ.25ರಂದು ರಾಜ್ಯದ 7 ಪವಿತ್ರ ನದಿಗಳಾದ ನೇತ್ರಾವತಿ, ಮಲಪ್ರಭಾ, ಕೃಷ್ಣಾ, ಕಾರಂಜಾ, ತುಂಗಭದ್ರಾ, ಶರಾವತಿ, ತುಂಗಾ ನದಿಗಳಲ್ಲಿ ಅಸ್ಥಿ ವಿಸರ್ಜನೆಯನ್ನು ಮಾಡಲಾಗುತ್ತದೆ. ಹಾಗೂ ಆ.26ರಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಧಾನಿಗೆ ಪ್ರಾಥಮಿಕ ವರದಿ
ಕೊಡಗಿನ ಪ್ರವಾಹ, ಸಂತ್ರಸ್ತರ ಪ್ರಾಥಮಿಕ ವರದಿಯನ್ನು ಪ್ರಧಾನ ಮಂತ್ರಿಯವರಿಗೆ ನೀಡಲಿದ್ದು, ಎಲ್ಲ ಬಿಜೆಪಿ ಶಾಸಕ, ಸಂಸದರ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ನಿಧಿಗೆ ನೀಡುತ್ತಿದ್ದೇವೆ’
-ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ