ಮೂಡಿಗೆರೆ: ಕಳ್ಳಬಟ್ಟಿ ದಂಧೆ ಆರೋಪಿಗೆ 1 ವರ್ಷ ಜೈಲು; 10 ಸಾವಿರ ದಂಡ
ಮೂಡಿಗೆರೆ, ಸೆ.21: ಕಳೆದ ವರ್ಷ ತಾಲೂಕಿನ ಕೆಸವಳಲು ಗ್ರಾಮದಲ್ಲಿ ಕಳ್ಳಭಟ್ಟಿ ಸಾರಾಯಿ ಮಾಲುಸಹಿತ ಬಂಧನಕ್ಕೊಳಗಾಗಿದ್ದ ಆರೋಪಿ ಸುಮಿತ್ರಾ ಎಂಬಾತನ ಪ್ರಕರಣದಲ್ಲಿ ಮೂಡಿಗೆರೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ತೀರ್ಪು ಹೊರಬಿದ್ದಿದ್ದು, ಆರೋಪಿಗೆ 1 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಲಾಗಿದೆ ಎಂದು ಮೂಡಿಗೆರೆ ವಲಯ ಅಬಕಾರಿ ನಿರೀಕ್ಷಕ ಕೇದಾರನಾಥ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಅವರು, ಕಳೆದ 2017ರ ಜ.20ರಂದು ಕೆಸವಳಲು ಗ್ರಾಮದ ಕೆ.ಇ.ಸುಮಿತ್ರಾ ಎಂಬುವವರ ಮನೆಮೇಲೆ ಅಬಕಾರಿ ದಾಳಿ ನಡೆಸಲಾಗಿತ್ತು. ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿಟ್ಟ 3 ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ 30 ಲೀಟರ್ ಬೆಲ್ಲದ ಕೊಳೆ ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿತ್ತು. ಅಬಕಾರಿ ಉಪ ಅಧೀಕ್ಷಕ ಸಂತೋಷ್ ಮೊಕದ್ದಮೆ ದಾಖಲಿಸಿದ್ದರು. ಆರೋಪಿ ಸುಮಿತ್ರಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಬಕಾರಿ ನಿರೀಕ್ಷಕ ಜೆ.ಡಿ.ಆನಂದ್ ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣ ಕೈಗೆತ್ತಿಕೊಂಡ ಮೂಡಿಗೆರೆ ಜೆಎಫ್ಎಂಸಿ ನ್ಯಾಯಾಲಯ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ನೀಡಿದೆ. ವಿಚಾರಣೆ ನಡೆಸಿರುವ ಪ್ರಧಾನ ಜೆಎಂಎಫ್ಸಿ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ್ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುನೀಲ್ ಪಾಟೀಲ್ ವಾದ ಮಂಡಿಸಿರುವುದಾಗಿ ತಿಳಿಸಿದ್ದಾರೆ.