ತನಿಖೆ ಪೂರ್ಣಗೊಳ್ಳುವ ಮೊದಲು ಆರೋಪ ಸರಿಯಲ್ಲ: ಎನ್ಎಜಿ
ಜೆಟ್ ಏರ್ವೇಸ್ನಲ್ಲಿ ಕಡಿಮೆಯಾದ ಕ್ಯಾಬಿನ್ ಗಾಳಿ ಒತ್ತಡ
ಮುಂಬೈ, ಸೆ. 22: ಮುಂಬೈಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ನಲ್ಲಿ ಗುರುವಾರ ಕ್ಯಾಬೀನ್ ಗಾಳಿ ಒತ್ತಡ ಕಡಿಮೆ ಆಗಿರುವ ಘಟನೆ ಬಗ್ಗೆ ಮುಕ್ತವಾಗಿ ಚರ್ಚಿಸಲು ತಾನು ಸಿದ್ಧ. ಆದರೆ ತನಿಖೆ ಪೂರ್ಣಗೊಳ್ಳುವ ಮೊದಲು ಸಿಬ್ಬಂದಿ ಮೇಲೆ ಆರೋಪ ಹೊರಿಸಬಾರದು ಎಂದು ನ್ಯಾಷನಲ್ ಏವಿಯೇಟರ್ ಗಿಲ್ಡ್ ಶುಕ್ರವಾರ ಹೇಳಿದೆ.
ಸಿಬ್ಬಂದಿ ಕ್ಯಾಬಿನ್ ಗಾಳಿ ಒತ್ತಡ ನಿರ್ವಹಿಸವ ಸ್ವಿಚ್ ಆನ್ ಮಾಡದೇ ಇದ್ದುದರಿಂದ ಪ್ರಯಾಣಿಕರ ಕಿವಿ ಹಾಗೂ ಮೂಗುಗಳಲ್ಲಿ ರಕ್ತ ಸ್ರಾವವಾಗಿತ್ತು. ಕೂಡಲೇ ವಿಮಾನವನ್ನು ಮುಂಬೈಯಲ್ಲಿ ಇಳಿಸಲಾಗಿತ್ತು. ಈ ವಿಮಾನದಲ್ಲಿ 171 ಮಂದಿ ಪ್ರಯಾಣಿಸುತ್ತಿದ್ದರು. ಇಬ್ಬರು ಪೈಲೆಟ್ಗಳು ಭಾಗಿಯಾಗಿರುವ ಈ ಘಟನೆಗೆ ಸಂಬಂಧಿಸಿ ನಾವು ಪ್ರಾಥಮಿಕ ಪರಿಶೀಲನೆ ನಡೆಸುತ್ತಿದ್ದೇವೆ. ಘಟನೆ ಬಗ್ಗೆ ಡಿಜಿಸಿಎ ತನಿಖೆ ನಡೆಸುತ್ತಿದೆ. ಆದುದರಿಂದ ತನಿಖೆಯ ಫಲಿತಾಂಶಕ್ಕೆ ಕಾಯುವುದು ವಿವೇಕ ಎಂದು ಎನ್ಜಿಎ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎನ್ಎಜಿ ಜೆಟ್ ಏರ್ವೇಸ್ನ ದೇಶೀಯ ಪೈಲೆಟ್ಗಳ ಸಂಸ್ಥೆ. ನರೇಶ್ ಗೋಯಲ್ ನಿಯಂತ್ರಿತ ಈ ವಿಮಾನ ಸೇವೆಯ 1000ಕ್ಕೂ ಅಧಿಕ ಸಿಬ್ಬಂದಿಯನ್ನು ಈ ಸಂಸ್ಥೆ ಪ್ರತಿನಿಧಿಸುತ್ತದೆ. ಎಫ್ಡಿಆರ್ (ವಿಮಾನದ ಡಾಟಾ ರೆಕಾರ್ಡರ್), ಸಿಪಿಆರ್ (ಕಾಕ್ಪಿಟ್ ಧ್ವನಿ ರೆಕಾರ್ಡರ್) ಅಥವಾ ಅತ್ಯಗತ್ಯದ ದಾಖಲೆಗಳನ್ನು ಹೊಂದದೆ ಘಟನೆಯ ಕಾರಣದ ಬಗ್ಗೆ ನಿಖರವಾಗಿ ಅಂದಾಜಿಸಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿಕೆ ತಿಳಿಸಿದೆ.