ಗವರ್ನ್ಮೆಂಟ್ ಆಫೀಸರ್ಸ್ ಕೋ-ಆಪರೇಟಿವ್ ಬ್ಯಾಂಕ್ನ ಶತಮಾನೋತ್ಸವ ಸಂಭ್ರಮ
ಮಂಗಳೂರು, ಸೆ.23: ನಗರದ ಕೊಡಿಯಾಲ್ಬೈಲ್ನಲ್ಲಿರುವ ದಿ ಸೌತ್ ಕೆನರಾ ಗವರ್ನ್ಮೆಂಟ್ ಆಫೀಸರ್ಸ್ ಕೋ-ಆಪರೇಟಿವ್ ಬ್ಯಾಂಕ್ನ ಶತಮಾನೋತ್ಸವ ಸಂಭ್ರಮ ಹಾಗೂ ನವೀಕೃತ ತಳ ಅಂತಸ್ತಿನ ಕಚೇರಿ ಉದ್ಘಾಟನಾ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸರಕಾರ, ಸರಕಾರಿ ನೌಕರರು, ಜನಪ್ರತಿನಿಧಿಗಳು ಒಂದು ಕುಟುಂಬವಿದ್ದಂತೆ. ಇವರೆಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯ ಎಂದರು.
ಸರಕಾರಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಿ ಉತ್ತಮ ಸೌಲಭ್ಯಗಳನ್ನು ಲಭ್ಯವಾದಾಗ ಅವರಿಂದ ಅತ್ಯುತ್ತಮ ಸೇವೆ ದೊರೆಯಲು ಸಾಧ್ಯವಾಗುತ್ತದೆ. ಸರಕಾರಿ ನೌಕರರಿಗೆ ಮನೆ ನಿರ್ಮಾಣ ಹಾಗೂ ಮಕ್ಕಳ ಶಿಕ್ಷಣಕ್ಕೆ ಕನಿಷ್ಠ ಬಡ್ಡಿಯಲ್ಲಿ ಸಾಲ ದೊರೆಯುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಖಾದರ್ ತಿಳಿಸಿದರು.
ದಿ ಸೌತ್ ಗವರ್ನ್ಮೆಂಟ್ ಆಫೀಸರ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಶಿವಾನಂದ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಡಿ. ವೇದವ್ಯಾಸ ಕಾಮತ್ ಬ್ಯಾಂಕ್ನ ಭದ್ರತಾ ಕೊಠಡಿ ಉದ್ಘಾಟಿಸಿದರು. ಈ ಸಂದರ್ಭ ಬ್ಯಾಂಕ್ನ ಅಭಿವೃದ್ಧಿಗಾಗಿ ಶ್ರಮಿಸಿದ್ದ ಈ ಹಿಂದೆ ಅಧ್ಯಕ್ಷರಾಗಿ, ಉಪಾಧಕ್ಷರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬ್ಯಾಂಕ್ನ ಸದಸ್ಯರ ಮಕ್ಕಳಿಗೆ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆಗೈದ ಸದಸ್ಯರ ಪ್ರತಿಭಾ ಪುರಸ್ಕಾರ ನಡೆಸಲಾಯಿತು.
ಅಪರ ಜಿಲ್ಲಾಧಿಕಾರಿ ಕುಮಾರ್, ನಿರ್ದೇಶಕರುಗಳಾದ ಜಯಂತ, ತಿಲೋತ್ತಮ, ಎಂ.ಬಿ. ದೇವದಾಸ್, ನಿತಿನ್ ಕುಮಾರ್ ಬಿ.ಕೆ.ಪದ್ಮನಾಭ ಜೋಗಿ, ಪ್ರದೀಪ್ ಡಿ‘ಸೋಜ, ಶಮಂತ್ ಕುಮಾರ್, ಸಿರಿಲ್ ರಾಬರ್ಟ್ ಡಿಸೋಜ, ಸ್ಮಿತಾ ಹೆಗ್ಡೆ ಎಂ.ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಲಕ್ಷ್ಮೀಶ್ ಎನ್.ಉಪಸ್ಥಿತರಿದ್ದರು.
ನಿರ್ದೇಶಕ ಪ್ರಕಾಶ್ ನಾಯಕ್ ಸ್ವಾಗತಿಸಿದರು.ಉಪಾಧ್ಯಕ್ಷ ಪಿ.ಕೆ.ಕೃಷ್ಣ ವಂದಿಸಿದರು.