ಕೇರಳ ಅತ್ಯಾಚಾರ ಪ್ರಕರಣ: ಕ್ರೈಸ್ತ ಸನ್ಯಾಸಿನಿಯರನ್ನು ಬಲಿಪಶು ಮಾಡುತ್ತಿರುವುದಕ್ಕೆ ಅಗ್ನಿವೇಶ್ ಖಂಡನೆ
ಹೊಸದಿಲ್ಲಿ, ಸೆ. 23: ಮಾಜಿ ಬಿಷಪ್ ಫ್ರಾಂಕೊ ಮುಳಕ್ಕಲ್ ಆರೋಪಿಯಾಗಿರುವ ಅತ್ಯಾಚಾರ ಪ್ರಕರಣದ ದೂರುದಾರಿಗೆ ಬೆಂಬಲ ನೀಡಿದ ಐವರು ಕ್ರೈಸ್ತ ಸನ್ಯಾಸಿನಿಯರನ್ನು ಬಲಿಪಶು ಮಾಡುತ್ತಿರುವುದಕ್ಕೆ ಸಾಮಾಜಿಕ ಹೋರಾಟಗಾರ ಅಗ್ನಿವೇಶ್ ಕೆಥೋಲಿಕ್ ಚರ್ಚ್ ಅನ್ನು ಖಂಡಿಸಿದ್ದಾರೆ. ತೀವ್ರ ಅಪಾಯ ಉಂಟಾಗುವ ಸಾಧ್ಯತೆ ಇದ್ದರೂ ಸಂತ್ರಸ್ತೆಯ ಪರ ನಿಲ್ಲುವ ಚಾರಿತ್ರಿಕ ನಿರ್ಧಾರ ಕೈಗೊಂಡ ಐವರು ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಎಲ್ಲ ಸಮಾನ ಮನಸ್ಕರ ಬೆಂಬಲ ಬೇಕಾಗಿದೆ ಎಂದು ಅಗ್ನಿವೇಶ್ ಹೇಳಿದ್ದಾರೆ.
ಕ್ರೈಸ್ತ ಸನ್ಯಾಸಿನಿಗಳ ವಿರುದ್ಧ ಕ್ರಮ ತೆಗೆದುಕೊಂಡಿರುವುದು ಜೀಸಸ್ ಕ್ರಿಸ್ತನನ್ನು ಶಿಲುಬೆಗೆ ಏರಿಸಿದ ಪ್ರಸಕ್ತ ಆವೃತ್ತಿ ಎಂದು ಅವರು ಹೇಳಿದರು. ಮುಳಕ್ಕಲ್ ವಿರುದ್ಧ ಪ್ರತಿಭಟನೆ ನಡೆಸಿದ ಕ್ರೈಸ್ತ ಸನ್ಯಾಸಿನಿಯರ ವಿರುದ್ಧ ಕೆಥೋಲಿಕ್ ಚರ್ಚ್ ಶಿಸ್ತು ಕ್ರಮ ತೆಗೆದುಕೊಂಡಿದೆ ಎಂಬ ವರದಿಯನ್ನು ಕೇರಳದ ವಯನಾಡ್ನ ಕರಕ್ಕಮಲ ಸಂತ ಮೇರಿ ಚರ್ಚ್ನ ವಿಕಾರ್ ಸ್ಟೀಫನ್ ಕೊಟ್ಟಕ್ಕಾಲ್ ರವಿವಾರ ನಿರಾಕರಿಸಿದ್ದಾರೆ.
ಮಾಜಿ ಬಿಷಪ್ ಮುಳಕ್ಕಲ್ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪ್ರಾರ್ಥನೆ, ಪೂಜನೆ ಹಾಗೂ ಮಾಸ್ನಲ್ಲಿ ಭಾಗವಹಿಸದಂತೆ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರೆಗೇಷನ್ ನಿಷೇಧ ಹೇರಿದೆ ಎಂದು ಲೂಸಿ ಕಲಪ್ಪುರಕ್ಕಲ್ ಪ್ರತಿಪಾದಿಸಿದ್ದರು.
ಚರ್ಚ್ನ ಕ್ರಮ ಈಗಲೂ ಆರೋಪಿಗಳಿಗೆ ಬೆಂಬಲ ನೀಡುತ್ತದೆ ಎಂಬ ಅನುಮಾನವನ್ನು ದೃಢಪಡಿಸುತ್ತದೆ. ಅಲ್ಲದೆ ಚರ್ಚ್ ಭಾರತದ ಸಂವಿಧಾನವನ್ನು ಹಾಗೂ ನಮ್ಮ ಪ್ರಜಾಪ್ರಭುತ್ವದ ನೈತಿಕತೆ ಉಲ್ಲಂಘಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.