4 ವರ್ಷವಾದರೂ ಸೆಟ್ಟೇರದ ‘ರಂಡಾಮೂಝಂ': ಚಿತ್ರಕಥೆ ವಾಪಸ್ ನೀಡುವಂತೆ ಲೇಖಕ ನಾಯರ್ ಆಗ್ರಹ
ತಿರುವನಂತಪುರಂ,ಅ.11 : ಖ್ಯಾತ ಮಲಯಾಳಂ ಲೇಖಕ ಎಂ ಟಿ ವಾಸುದೇವನ್ ನಾಯರ್ ಅವರ ಪ್ರಶಸ್ತಿ ವಿಜೇತ ` ರಂಡಾಮೂಝಂ ' ಕಾದಂಬರಿಯಾಧರಿತ ಚಲನಚಿತ್ರವನ್ನು ರೂ. 1,000 ಕೋಟಿ ಬಜೆಟಿನಲ್ಲಿ ನಿರ್ಮಿಸಲು ಚಿತ್ರಕಥೆಯನ್ನು ನಾಲ್ಕು ವರ್ಷಗಳ ಹಿಂದೆಯೇ ಲೇಖಕ ನಾಯರ್ ಅವರು ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ ಆರ್ ಶೆಟ್ಟಿ ಅವರಿಗೆ ನೀಡಿದ್ದರೂ ಖ್ಯಾತ ನಟ ಮೋಹನ್ಲಾಲ್ ನಾಯಕನಟರಾಗಿ ಭೀಷ್ಮನ ಪಾತ್ರದಲ್ಲಿ ಕಾಣಿಸಲಿದ್ದ ಈ ಚಿತ್ರದ ಚಿತ್ರೀಕರಣ ಇನ್ನೂ ಆರಂಭಗೊಳ್ಳದೇ ಇರುವುದರಿಂದ ಆಕ್ರೋಶಗೊಂಡಿರುವ ನಾಯರ್ ತಮ್ಮ ಚಿತ್ರಕಥೆಯನ್ನು ವಾಪಸ್ ನೀಡುವಂತೆ ಆಗ್ರಹಿಸಿದ್ದಾರೆ.
ಮೂರು ವರ್ಷಗಳೊಳಗಾಗಿ ಚಿತ್ರ ನಿರ್ಮಿಸಬೇಕೆಂಬ ಷರತ್ತಿನೊಂದಿಗೆ ಚಿತ್ರಕಥೆಯನ್ನು ನಿರ್ದೇಶಕರಿಗೆ ನೀಡಲಾಗಿತ್ತೆನ್ನಲಾಗಿದ್ದು ಈ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದರೂ ಪ್ರಯೋಜನವಾಗದೇ ಇರುವುದರಿಂದ ನಾಯರ್ ಇದೀಗ ತಮ್ಮ ಚಿತ್ರಕಥೆ ವಾಪಸ್ ನೀಡಲು ಹೇಳಿದ್ದಾರಲ್ಲದೆ ಅದಕ್ಕಾಗಿ ತಮಗೆ ನೀಡಲಾಗಿದ್ದ ಮುಂಗಡ ಸಂಭಾವನೆಯನ್ನೂ ವಾಪಸ್ ನೀಡುವುದಾಗಿ ಹೇಳಿದ್ದಾರೆ. ಈ ರೂ. 1,000 ಕೋಟಿಯ ಪ್ರಸ್ತಾವಿತ ಚಿತ್ರ ಭಾರತೀಯ ಚಿತ್ರರಂಗದಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ಚಿತ್ರವಾಗಲಿದೆಯೆಂದೂ ಬಿಂಬಿಸಲಾಗಿತ್ತು.
ಚಿತ್ರದಲ್ಲಿ ಖ್ಯಾತ ನಟ ಮೋಹನಲಾಲ್ ಅವರು ಭೀಷ್ಮನ ಪಾತ್ರವನ್ನು ನಿರ್ವಹಿಸಲಿದ್ದರು.