ರಾಜ್ಯದ ಎಲ್ಲಾ ಪಿ.ಎಲ್.ಡಿ ಬ್ಯಾಂಕುಗಳಿಗೆ ಸಾಲ ಮನ್ನಾ ಯೋಜನೆ ವಿಸ್ತರಿಸುವಂತೆ ಮನವಿ
ಚಿಕ್ಕಮಗಳೂರು, ಅ.11: ರಾಜ್ಯದ ಎಲ್ಲಾ ಪಿ.ಎಲ್.ಡಿ ಬ್ಯಾಂಕುಗಳಿಗೆ ಸಾಲ ಮನ್ನಾ ಯೋಜನೆ ವಿಸ್ತರಿಸುವಂತೆ ಮೂಡಿಗೆರೆ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಹಳಸೆ ಶಿವಣ್ಣ ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ್ ರಿಗೆ ಮನವಿ ನೀಡಿದರು.
ಮೂಡಿಗೆರೆ ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಹಳಸೆ ಶಿವಣ್ಣ ಮನವಿ ನಂತರ ಮಾತನಾಡಿ ರಾಜ್ಯ ಸರ್ಕಾರವು ರೈತರ ಸಂಕಷ್ಟವನ್ನು ಮನಗೊಂಡು ಹಾಗು ಚುನಾವಣಾ ಪೂರ್ವದಲ್ಲಿ ಎಲ್ಲಾ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿದ ಪ್ರಕಾರ ರಾಜ್ಯ ಸರ್ಕಾರವು ರೈತರ ಬೆಳೆ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ ಮತ್ತು ರೈತರು ಹೆಮ್ಮೆ ಪಡುವಂತಹ ವಿಷಯ. ಆದರೆ ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರಾಜ್ಯದ 177 ಪಿ.ಎಲ್.ಡಿ ಬ್ಯಾಂಕುಗಳ ಮೂಲಕ ದೀರ್ಘಾವದಿ ಕೃಷಿ ಸಾಲ ಪಡೆದ ರೈತರೂ ಸಹ ಸುಸ್ಥಿದಾರರಾಗಿ ಮುಂದುವರೆದಿರುತ್ತಾರೆ ಎಂದರು.
ಸಾಲ ಮನ್ನಾ ಯೋಜನೆಯ ಪ್ರಯೋಜನವು ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ರೈತರು ಮಾಡಿದ ಬೆಳೆ ಸಾಲಕ್ಕೆ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಬೆಳೆ ಸಾಲಕ್ಕೆ ಮಾತ್ರ ಅನ್ವಯವಾಗುವುದೆಂದು ತಮ್ಮ ಆದೇಶದಲ್ಲಿ ತಿಳಿಸಿದ್ದು, ಇದರಿಂದ ಪಿ.ಎಲ್.ಡಿ ಬ್ಯಾಂಕುಗಳಲ್ಲಿ ದೀರ್ಘಾವಧಿ ಕೃಷಿ ಸಾಲ ಪಡೆದ ರೈತರು ಸಾಲ ಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಇದರಿಂದ ಪಿ.ಎಲ್.ಡಿ ಬ್ಯಾಂಕಿನಲ್ಲಿ ಸಾಲ ಪಡೆದ ರೈತರಿಗೆ ಅನ್ಯಾಯವಾದಂತಾಗಿದೆ ಮತ್ತು ತಮ್ಮ ಸರ್ಕಾರದ ಆದೇಶದ ಪ್ರಕಾರ ಸಾಲಗಾರ ರೈತರಿಗೆ ಸಾಲ ವಸೂಲಾತಿಗಾಗಿ ಯಾವುದೇ ತರಹದ ಕ್ರಮ ವಹಿಸಬಾರದೆಂದು ಮನವಿ ಮಾಡಲಾಯಿತು.