ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶ
ಚೆನ್ನೈ,ಅ.12: ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ರಸ್ತೆ ಕಾಮಗಾರಿಗಳ ಗುತ್ತಿಗೆಗಳನ್ನು ನೀಡುವಾಗ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ.
ಜಾಗ್ರತ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ)ವು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಬಳಿಕ ನ್ಯಾ.ಎ.ಡಿ.ಜಗದೀಶ ಚಂದ್ರ ಅವರು ಈ ಆದೇಶವನ್ನು ಹೊರಡಿಸಿದರು. ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ ಈ ಭ್ರಷ್ಟಾಚಾರದ ದೂರನ್ನು ದಾಖಲಿಸಿದ್ದಾರೆ.
ಡಿವಿಎಸಿಯ ವರದಿಯು ತೃಪ್ತಿಕರವಾಗಿಲ್ಲವೆಂದು ಹೇಳಿದ ನ್ಯಾಯಾಲಯವು ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒಂದು ವಾರದೊಳಗೆ ಸಿಬಿಐಗೆ ಹಸ್ತಾಂತರಿಸುವಂತೆ ಅದಕ್ಕೆ ನಿರ್ದೇಶ ನೀಡಿತು. ಮೂರು ತಿಂಗಳುಗಳಲ್ಲಿ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸುವಂತೆ ಸಿಬಿಐಗೆ ಅದು ಸೂಚಿಸಿತು.
ಪಳನಿಸ್ವಾಮಿ ಅವರು ತನ್ನ ಅಧಿಕಾರವನ್ನು ದುರುಪಯೋಗಿಸಿಕೊಂಡಿದ್ದಾರೆ ಮತ್ತು 3,500 ಕೋ.ರೂ.ಮೌಲ್ಯದ ಕಾಮಗಾರಿಗಳನ್ನು ತನ್ನ ಬಂಧುಗಳು ಮತ್ತು ಬೇನಾಮಿಗಳಿಗೆ ವಹಿಸಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.